ಪ್ರತಿಭಟನಾ ನಿರತ ಪೊಲೀಸರ ಮೇಲೆ ದೇಶದ್ರೋಹ ಪ್ರಕರಣ!

ರಾಜ್ಯದಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸಲು ಪೊಲೀಸರು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಇಬ್ಬರು ಪ್ರತಿಭಟನಾ ನಿರತ ಪೊಲೀಸರ ವಿರುದ್ಧ ದೇಶದ್ರೋಹ...
ಪ್ರತಿಭಟನಾ ನಿರತ ಪೊಲೀಸರ ಮೇಲೆ ದೇಶದ್ರೋಹ ಪ್ರಕರಣ!

ಬೆಂಗಳೂರು: ರಾಜ್ಯದಲ್ಲಿ ಸಾಮೂಹಿಕ ಪ್ರತಿಭಟನೆ ನಡೆಸಲು ಪೊಲೀಸರು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಇಬ್ಬರು ಪ್ರತಿಭಟನಾ ನಿರತ ಪೊಲೀಸರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಶಶಿಧರ್ ವೇಣುಗೋಪಾಲ್ ಹಾಗೂ ಹುಬ್ಬಳ್ಳಿಯ ಬಸವರಾಜ್ ಕೊರಾವರ್ ಎಂಬುವವರ ಮನೆ ಮೇಲೆ ಕಳೆದ ರಾತ್ರಿ ದಾಳಿ ಮಾಡಿರುವ ಪೊಲೀಸರು ಇಬ್ಬರನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಅಲ್ಲದೆ, ಮೂವರ ವಿರುದ್ಧವೂ ದೇಶದ್ರೋಹಗಳನ್ನು ದಾಖಲು ಮಾಡಿದ್ದಾರೆಂದು ತಿಳಿದುಬಂದಿದೆ.

ಸಾಮೂಹಿಕ ಪ್ರತಿಭಟನೆ ಹಿಂದ ಶಶಿಧರ್ ವೇಣುಗೋಪಾಲ್ ಅವರು ಇದ್ದು, ಶಶಿಧರ್ ಅವರೇ ಪ್ರತಿಭಟನೆಗೆ ಯೋಜನೆ ರೂಪಿಸಿದ ಪ್ರಮುಖ ವ್ಯಕ್ತಿಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಶಿಧರ್ ಮತ್ತು ಬಸವರಾಜ್ ಅವರು ಪೊಲೀಸ ಹುದ್ದೆಯಲ್ಲೇ ಕಾರ್ಯನಿರ್ವಹಿಸದವರಾಗಿದ್ದು, ಕೆಲವು ಕಾರಣಗಳಿಂದಾಗಿ ಇಬ್ಬರನ್ನು ಸೇವೆಯಿಂದ ತೆಗೆದುಹಾಕಲಾಗಿತ್ತು. ಇದೀಗ ಇಬ್ಬರ ವಿರುದ್ಧವೂ ಎಸ್ಸೆನ್ಶಿಯಲ್ ಸರ್ವಿಸಸ್ ಮೇಂಟೇನನ್ಸ್ ಕಾಯ್ದೆ 2013ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಶಶಿಧರ್ ಅವರನ್ನು ಬುಧವಾರ ಯಲಹಂಕದಲ್ಲಿರುವ ಅವರ ನಿವಾಸದಲ್ಲಿ ಬಂಧನಕ್ಕೊಳಪಡಿಸಲಾಗಿದೆ ಎಂದು ಡಿಸಿಪಿ ಹರ್ಷ ಅವರು ಹೇಳಿದ್ದಾರೆ.

ಶಶಿಧರ್ ಅವರು ಪೊಲೀಸ್ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಕಿರಿಯರಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪದ ಮೇಲೆ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಇದರಂತೆ ಬಸವರಾಜ್ ಅವರನ್ನು ಕೆಲವು ಗಂಭೀರ ಆರೋಪಗಳ ಮೇಲೆ ಹುದ್ದೆಯಿಂದ ತೆಗೆದುಹಾಕಲಾಗಿದೆ. ಇದೀಗ ಬಂಧನಕ್ಕೊಳಗಾಗಿರುವ ಶಶಿಧರ್ ಅವರು ಆಹಾರ ಸೇವನೆಗೆ ನಿರಾಕರಿಸುತ್ತಿದ್ದಾರೆಂದು ಇಲಾಖೆಯ ಒಳಗಿನ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಪ್ರತಿಭಟನೆ ಕುರಿತಂತೆ ಮಾತನಾಡಿರುವ ಓಂ ಪ್ರಕಾಶ್ ಅವರು, ಪ್ರತಿಭಟನಾ ದಿನದಂದು ಎಂದಿನಂತೆ ಕಾರ್ಯಗಳು ಮುಂದುವರೆಯಲಿದೆ. ಸಾಮೂಹಿಕ ರಜೆ ವಿಚಾರ ವದಂತಿಯಾಗಿದ್ದು, ಯಾವುದೇ ಪೊಲೀಸರು ರಜೆಗೆ ಮನವಿಯನ್ನು ಸಲ್ಲಿಸಿಲ್ಲ. ಹಿರಿಯ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಿದ್ದು, ತಪ್ಪು ಮಾಹಿತಿಗಳು ಎಲ್ಲಿಂದ ಹಬ್ಬುತ್ತಿದೆ ಎಂಬುದನ್ನು ತಪಾಸಣೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ತಡವಾಗಿ ಮಾಹಿತಿ ತಿಳಿದ ಅಧಿಕಾರಿಗಳು
ಪೊಲೀಸರು ಸಾಮೂಹಿಕ ಪ್ರತಿಭಟನೆ ಕುರಿತಂತೆ ಕಳೆದ 3 ವಾರಗಳಿಂದಲೂ ಸಾಮಾಜಿಕ ಜಾಣದಲ್ಲಿ ಮಾಹಿತಿಗಳು ಬಿತ್ತರವಾಗುತ್ತಿತ್ತು. ಈ ಪ್ರತಿಭಟನೆಗೆ ಶೇ.60 ರಷ್ಟು ಪೊಲೀಸರು ಬೆಂಬಲ ವ್ಯಕ್ತಪಡಿಸಿದ್ದರೆಂಬ ಮಾಹಿತಿ ಇದೀಗ ತಿಳಿದುಬಂದಿದೆ. ಆದರೆ, ಈ ಮಾಹಿತಿಯನ್ನು ತಿರಸ್ಕರಿಸಿರುವ ಕರ್ನಾಟಕ ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಾಗೂ ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

2 ಸಾವಿರ ಸಿಬ್ಬಂದಿಗಳು ಶುಕ್ರವಾರ ಹಾಗೂ ಶನಿವಾರ ದಂದು ಕಾರ್ಯನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳೇ ಸಂಚಾರ ವ್ಯವಸ್ಥೆ ಹಾಗೂ ಕಾನೂನು ನಿಯಮಗಳನ್ನು ನೋಡಿಕೊಳ್ಳಲಿದ್ದಾರೆ. ಪ್ರತಿಭಟನಾ ದಿನವಾದ ನಾಳೆ 50 ಸಾವಿರ ಪೊಲೀಸರು ಪ್ರತಿಭಟನೆ ಹಾಜರಾಗಲಿದ್ದಾರೆಂದು ಮೂಲಗಳು ತಿಳಿಸಿದ್ದು, ಇದರಲ್ಲಿ ಕೆಲವು ಪೊಲೀಸರು ಸರ್ಕಾರದ ಎಸ್ಮಾ ಕಾಯ್ದೆ ಎಚ್ಚರಿಕೆಗೆ ಹೆದರಿ ರಜೆ ಮನವಿ ಪತ್ರವನ್ನು ಹಿಂಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com