
ಬೆಂಗಳೂರು: 500 ಮತ್ತು 1000 ರು. ನೋಟುಗಳ ಮೇಲೆ ನಿಷೇಧ ಹೇರಿರುವ ಕೇಂದ್ರ ಸರ್ಕಾರದ ನಡೆ ಜನ ಸಾಮಾನ್ಯರ ಮೇಲೆ ವ್ಯಾಪಕ ಪರಿಣಾಮ ಬೀರಿದ್ದು, ವಿವಿಧ ಮಾರುಕಟ್ಟೆಗಳಲ್ಲಿ ಚಿಲ್ಲರೆಗಾಗಿ ಗ್ರಾಹಕರು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕರ್ನಾಟಕದಲ್ಲೂ ಕೇಂದ್ರಸರ್ಕಾರದ ನಡೆ ವ್ಯಾಪಕ ಪರಿಣಾಮ ಬೀರಿದ್ದು, ಮಾರುಕಟ್ಟೆಗಳಲ್ಲಿ 500 ರು. ಮತ್ತು 1000 ರು. ನೋಟುಗಳ ಚಲಾವಣೆ ಇಲ್ಲದೆ ಗ್ರಾಹಕರು ಪರದಾಡುವಂತಾಗಿದೆ. ನಿತ್ಯ ಬಳಕೆ ವಸ್ತುಗಳ ಖರೀದಿಗೆ ಆಗಮಿಸಿದ್ದ ಗ್ರಾಹಕರು ಚಿಲ್ಲರೆ ಇಲ್ಲದೆ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ. ಇನ್ನು ಬ್ಯಾಂಕ್ ಗಳು ಮತ್ತು ಎಟಿಎಂ ಗಳು ಕಾರ್ಯ ನಿರ್ವಹಿಸದ ಹಿನ್ನಲೆಯಲ್ಲಿ ಗ್ರಾಹಕರು ಚಿಲ್ಲರೆಗಾಗಿ ತೀವ್ರ ಪರದಾಡುವಂತಾಗಿತ್ತು. ಸರ್ಕಾರದ ದಿಢೀರ್ ಕ್ರಮವನ್ನು ಕೆಲವರು ಶ್ಲಾಘಿಸಿದರೆ ಚಿಲ್ಲರೆ ಸಿಗದೆ ಪರದಾಡಿದ ಗ್ರಾಹಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಸರ್ಕಾರ ನಿರ್ಧಾರ ಹೊರ ಬೀಳುತ್ತಿದ್ದಂತೆಯೇ ನಿನ್ನೆ ರಾತ್ರಿಯಿಂದಲೇ ರಾಜ್ಯಾದ್ಯಂತ ಸುದ್ದಿ ತಿಳಿದವರೆಲ್ಲಾ ಎಟಿಎಂ ಮುಂದೆ ಜಮಾಯಿಸಿ ಹಣ ಡ್ರಾಗೆ ಮುಗಿಬಿದಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಾದ ಮೈಸೂರು, ಹುಬ್ಬಳ್ಳಿ, ಕಲಬುರಗಿ, ಹಾವೇರಿ, ಮಂಡ್ಯದಲ್ಲೂ ಜನ ಎಟಿಎಂಗೆ ಮುಗಿಬಿದ್ದಿದ್ದು ಕಂಡು ಬಂತು. ನಗರದ ಅನೇಕ ಎಟಿಎಂ ಕೌಂಟರ್ಗಳಲ್ಲಿ ಗ್ರಾಹಕರ ಸಂಖ್ಯೆ ಜಾಸ್ತಿಯಾಗುತ್ತಿದಂತೆ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. 500, ಸಾವಿರ ರು. ಮುಖಬೆಲೆ ನೋಟುಗಳು ಚಲಾವಣೆಯಲ್ಲಿರುವುದಿಲ್ಲ ಎಂಬುದನ್ನು ಮನಗಂಡಿರುವ ಬಾರ್ ಗಳು, ಪೆಟ್ರೋಲ್ ಬಂಕ್ ಗಳು ಅಂಗಡಿ ಮುಂಗಟ್ಟು ಸ್ವಯಂಪ್ರೇರಿತವಾಗಿ ಬಾಗಿಲು ಎಳೆಯುತ್ತಿವೆ.
ಪ್ರಮುಖವಾಗಿ ಬೆಂಗಳೂರು ನಗರದ ಕೆಆರ್ ಮಾರುಕಟ್ಟೆ, ಕೆಆರ್ ಪುರಂ ಮಾರುಕಟ್ಟೆ, ಯಶವಂತಪುರದ ಎಪಿಎಂಸಿ ಹಾಗೂ ವಿವಿಧ ಮಾರುಕಟ್ಟೆಗಳಲ್ಲಿ ಚಿಲ್ಲರೆ ಸಿಗದೆ ಗ್ರಾಹಕರು ಪರದಾಡುತ್ತಿದ್ದಾರೆ. ಹಲವೆಡೆ ಗ್ರಾಹಕರು ಹಾಗೂ ಮಾರಾಟಗಾರರ ನಡುವೆ ಚಿಲ್ಲರೆಗಾಗಿ ವಾಗ್ವಾದ ನಡೆದ ಪ್ರಸಂಗಗಳು ಕೂಡ ಸಾಮಾನ್ಯವಾಗಿವೆ. ಇನ್ನು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಟೋಲ್ ಗಳಲ್ಲೂ ಚಿಲ್ಲರೆಗಾಗಿ ಪರದಾಟ ಆರಂಭವಾಗಿದ್ದು, 500 ಮತ್ತು 1000 ರು ಮುಖಬೆಲೆಯ ನೋಟುಗಳನ್ನು ವಾಹನ ಚಾಲಕರಿಗೇ ಹಿಂದುರುಗಿಸಲಾಗುತ್ತಿದೆ.
ಒಲ್ಲದ ಮನಸ್ಸಿನಿಂದಲೇ ಕೇಂದ್ರ ಸರ್ಕಾರದ ನಡೆಗೆ ಸ್ವಾಗತ
ಇತ್ತ ಕೇಂದ್ರ ಸರ್ಕಾರದ ನಡೆಯಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗಿದ್ದರೂ ಕೂಡ ಕಪ್ಪುಹಣ ನಿಯಂತ್ರಿಸುವ ಉದ್ದೇಶದಿಂದ ಮೋದಿ ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನಾರ್ಹವಾಗಿದೆ. ಪ್ರಸ್ತುತ ನಮಗೆ ತೊಂದರೆಯಾಗಬಹುದು. ಆದರೆ ಭವಿಷ್ಯದಲ್ಲಿ ಇದರಿಂದ ನಮಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವಿದೆ ಎಂದು ಕೆಲ ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.
Advertisement