
ಬೆಂಗಳೂರು: ಎಟಿಎಂ ಹಾಕಲು ತಂದಿದ್ದ ಸುಮಾರು 1.38 ಕೋಟಿ ಹಣದೊಂದಿಗೆ ಚಾಲಕ ಪರಾರಿಯಾದ ಘಟನೆ ಬುಧವಾರ ಬೆಂಗಳೂರಿನಲ್ಲಿ ನಡೆದಿದ್ದು, ಗುರುವಾರ ಬೆಳಗ್ಗೆ ಮೌಂಟ್ ಕಾರ್ಮಲ್ ಕಾಲೇಜು ಬಳಿ ವಾಹನ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ಕೆಜಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗೆ ಹಣ ತುಂಬಿಸುತ್ತಿದ್ದ ವೇಳೆ ಕಾರಿನ ಚಾಲಕ ಡಾಮಿನಿಕ್ ಸೆಲ್ವರಾಜ್ ಎಂಬಾತ ಸುಮಾರು 1.38 ಕೋಟಿ ರು. ಮೌಲ್ಯದ ಹೊಸ ನೋಟುಗಳಿರುವ ಬಾಕ್ಸ್ ನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದು, ಇಂದು ಬೆಳಗ್ಗೆ ಕಾರು ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜು ಬಳಿ ಪತ್ತೆಯಾಗಿದೆ. ಕಾರಿನಲ್ಲಿ ಕೇವಲ 45 ಲಕ್ಷ ಹಣ ಮಾತ್ರ ಉಳಿದಿದ್ದು, ಬಾಕಿ 92 ಲಕ್ಷ ಹಣದೊಂದಿಗೆ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಚಾಲಕ ಡಾಮಿನಿಕ್ ಸೆಲ್ವರಾಜ್ ಪತ್ನಿ ಮತ್ತು ಆತನ ಮಗಳು ಕೂಡ ನಿನ್ನೆಯ ಪೊಲೀಸರ ವಿಚಾರಣೆ ಬಳಿಕ ನಾಪತ್ತೆಯಾಗಿದ್ದು, ಡಾಮಿನಿಕ್ ನೊಂದಿಗೆ ಅವರೂ ಕೂಡ ಪರಾರಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಪ್ರಕರಣ?
ಲಾಜಿಕ್ಯಾಶ್ ಎಂಬ ಸಂಸ್ಥೆ ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆ ಪಡೆದಿದ್ದು, ಅದರಂತೆ ನಿನ್ನೆ ಕೆಜಿರಸ್ತೆಯಲ್ಲಿ ವಿವಿಧ ಬ್ಯಾಂಕುಗಳಿಗೆ ಹಣ ತುಂಬಿಸಲು ತನ್ನ ಸಿಬ್ಬಂದಿಗಳನ್ನು ಕಳುಹಿಸಿತ್ತು. ಅದರಂತೆ ಕಾರು ಚಾಲಕ ಡಾಮಿನಿಕ್ ಸೆಲ್ವರಾಜ್, ಶಿವಕುಮಾರ್, ಸಲೀಂ ಮತ್ತು ಗನ್ ಮ್ಯಾನ್ ಚಮನ್ ಲಾಲ್ ಎಂಬುವವರು ಕೆಜಿರಸ್ತೆಯಲ್ಲಿರುವ ಎಸ್ ಬಿಐ, ಕೋಟಕ್ ಮಹೀಂದ್ರಾ ಬ್ಯಾಂಕ್ ಗಳಿಂದ ಸುಮಾರು 1.38 ಕೋಟಿ ಹಣ ಸಂಗ್ರಹಿಸಿದ್ದರು. ಅದರಲ್ಲಿ 1.37 ಕೋಟಿ ಹಣ ಹೊಸ 2000 ರು. ಮುಖೆಬೆಲಯದ್ದಾಗಿತ್ತು. ಉಳಿದ 1 ಲಕ್ಷ ಹಣ 100 ರು.ಮುಖಬೆಲಯದ್ದಾಗಿತ್ತು. ಬಳಿಕ ಕೆಜಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಮುಂದೆ ವಾಹನ ನಿಲ್ಲಿಸಿ ಸಿಬ್ಬಂದಿಗಳಾದ ಸಲೀಂ ಹಾಗೂ ಶಿವಕುಮಾರ್ ಎಟಿಎಂನೊಳಗೆ ಹೋಗಿ ಹಣ ತುಂಬಿಸುತ್ತಿದ್ದರು. ಈ ವೇಳೆ ಕಾರಿನ ಬಳಿ ಗನ್ ಮ್ಯಾನ್ ಚಮನ್ ಲಾಲ್ ಹಾಗೂ ಕಾರು ಚಾಲಕ ಡಾಮಿನಿಕ್ ಸೆಲ್ವರಾಜ್ ಮಾತ್ರ ಇದ್ದರು.
ಗನ್ ಮ್ಯಾನ್ ಚಮನ್ ಲಾಲ್ ಮೂತ್ರ ವಿಸರ್ಜನೆಗೆಂದು ಹೋದಾಗ ಇದೇ ಸಮಯಕ್ಕಾಗಿ ಕಾಯುತ್ತಿದ್ದ ಡಾಮಿನಿಕ್ ಸುಮಾರು 1.38 ಕೋಟಿ ಹಣವಿದ್ದ ವಾಹನದೊಂದಿಗೆ ಪರಾರಿಯಾಗಿದ್ದಾನೆ. ವಿಚಾರ ತಿಳಿದ ಇತರೆ ಸಿಬ್ಬಂದಿಗಳು ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಲಾಜಿಕ್ಯಾಶ್ ಸಂಸ್ಥೆಯಲ್ಲಿರುವ ಚಾಲಕ ಡಾಮಿನಿಕ್ ದಾಖಲೆ ಪರಿಶೀಲಿಸಿದ ಪೊಲೀಸರು ಆತನ ಮನೆ ಲಿಂಗಾರಾಜಪುರದಲ್ಲಿರುವುದನ್ನು ಪತ್ತೆ ಮಾಡಿ ಅಲ್ಲಿಗೆ ವಿಚಾರಣೆಗಾಗಿ ತೆರಳಿದ್ದಾರೆ. ಈ ವೇಳೆ ಡಾಮಿನಿಕ್ ಮನೆಯಲ್ಲಿ ಆತನ ಪತ್ನಿ ಹಾಗೂ ಮಗಳು ಮಾತ್ರ ಇದ್ದು, ಅವರನ್ನು ವಿಚಾರಿಸಿದಾಗ ಆತ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ. ಬಳಿಕ ಪೊಲೀಸರು ವಾಪಸಾಗಿದ್ದು, ಪೊಲೀಸರು ಹೋದ ಬಳಿಕ ಮನೆಗೆ ಬಂದ ಡಾಮಿನಿಕ್ ಆತನ ಪತ್ನಿ ಮತ್ತು ಮಗಳನ್ನು ಕರೆದೊಯ್ದಿದ್ದಾನೆ.
ಮೌಂಟ್ ಕಾರ್ಮಲ್ ಕಾಲೇಜು ಬಳಿ ಕಾರು ಪತ್ತೆ
ಇನ್ನು ಹಣವಿದ್ದ ಕಾರಿನೊಂದಿಗೆ ಪರಾರಿಯಾಗಿದ್ದ ಚಾಲಕ ಡಾಮಿನಿಕ್ ನಿನ್ನೆ ತಡರಾತ್ರಿ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜು ಬಳಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ವಿಚಾರ ತಿಳಿದು, ಅವರು ಪರಿಶೀಲಿಸಿದಾಗ ಅದರಲ್ಲಿ ಸುಮಾರು 45 ಲಕ್ಷ ರು.ಹಣವಿತ್ತು ಎಂದು ತಿಳಿದುಬಂದಿದೆ. ಉಳಿದ ಸುಮಾರು 92 ಲಕ್ಷ ರು.ಹಣದೊಂದಿಗೆ ಡಾಮಿನಿಕ್ ಪರಾರಿಯಾಗಿದ್ದಾನೆ. ಪ್ರಸ್ತುತ ಪರಾರಿಯಾಗಿರುವ ಚಾಲಕ ಡಾಮಿನಿಕ್ ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Advertisement