ಕೊಪ್ಪಳ: ಮದುವೆಗೆ ಪ್ರಿಯತಮೆ ನಕಾರ, ಮನನೊಂದ ಯುವಕ ಆತ್ಮಹತ್ಯೆಗೆ ಶರಣು

ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಮದುವೆಗೆ ಪ್ರಿಯತಮೆ ನಿರಾಕರಿಸಿದ್ದರಿಂದ ಮನನೊಂದ ಪ್ರಿಯಕರ ಆಕೆಯ ಮನೆ ಮುಂದೆ ವಿಷ ಸೇವಿಸಿ...
ಕಿರಣ್
ಕಿರಣ್

ಕೊಪ್ಪಳ: ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಮದುವೆಗೆ ಪ್ರಿಯತಮೆ ನಿರಾಕರಿಸಿದ್ದರಿಂದ ಮನನೊಂದ ಪ್ರಿಯಕರ ಆಕೆಯ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೊಪ್ಪಳ ತಾಲೂಕಿನ ಜಿರಹಾಳ ಕಲ್ಗುಡಿಯ ನಿವಾಸಿ ಕಿರಣ್ ಮತ್ತು ಕೊಪ್ಪಳ ತಾಲೂಕಿನ ಮುನಿರಾಬಾದ್ ನಿವಾಸಿ ಸುರೇಖ(ಹೆಸರು ಬದಲಿಸಲಾಗಿದೆ) ಸಂಬಂಧಿಗಳಾಗಿದ್ದು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದೀಗ ಮದುವೆಗೆ ಸುರೇಖ ಒಪ್ಪದಿದ್ದರಿಂದ ಮನನೊಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಕಿರಣ್ ಸುರೇಖ ಮೇಲಿನ ತನ್ನ ಪ್ರೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಕಿರಣ್ ಹುಬ್ಬಳ್ಳಿಯಲ್ಲಿ ಆನಿಮೇಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು ಸುರೇಖ ಸಹ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಬಿಇ ಓದುತ್ತಿದ್ದಳು. ಇಬ್ಬರು ಹುಬ್ಬಳ್ಳಿಯಲ್ಲಿ ಲೀವಿಂಗ್ ಟುಗೆದರ್ ರೀತಿಯಲ್ಲಿ ಜೀವನ ಸಾಗಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿದ ಸುರೇಖ ಕುಟುಂಬಸ್ಥರು ಆಕೆಗೆ ಬೇರೆ ಸಂಬಂಧ ನೋಡಿ ಮದುವೆ ಮಾಡಲು ಸಿದ್ಥತೆ ನಡೆಸಿದ್ದರು. ಸುರೇಖ ಸಹ ಮದುವೆಗೆ ಒಪ್ಪಿಕೊಂಡಿದ್ದರಿಂದ ಆಕೆಯ ಮನೆಗೆ ಹೋಗಿ ಕಿರಣ್ ಗಲಾಟೆ ಮಾಡಿದ್ದ ಎನ್ನಲಾಗುತ್ತಿದೆ.

ಮದುವೆಗೆ ಸುರೇಖ ಒಪ್ಪದಿದ್ದರಿಂದ ಜೀವನದಲ್ಲಿ ಬೇಸರಗೊಂಡ ಕಿರಣ್ ತನ್ನ ಮೊಬೈಲ್ ನಲ್ಲಿ ಸೆಲ್ಫಿ ವಿಡಿಯೋ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ, ತನ್ನನ್ನು ಕ್ಷಮಿಸುವಂತೆ ತಂದೆ-ತಾಯಿಗೆ ಕೇಳಿದ್ದಾನೆ. ಬಳಿಕ ತನ್ನ ಸಾವಿಗೆ ಸುರೇಖಾ ಕುಟುಂಬಸ್ಥರೆ ಕಾರಣ ಎಂದು ಹೇಳಿ ಆ ವಿಡಿಯೋವನ್ನು ತನ್ನ ಅಕ್ಕನ ಮೊಬೈಲ್ ಗೆ ಕಳುಹಿಸಿದ್ದಾನೆ.

ಕಿರಣ್ ಸುರೇಖ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಕುಡಿದು ಬಿದ್ದಿದ್ದ ಕಿರಣ್ ನನ್ನು ಸುರೇಖ ಪೋಷಕರು ಆಸ್ಪತ್ರೆಗೆ ದಾಖಲಿಸದೆ ಕಿರಣ್ ಪೋಷಕರಿಗೆ ವಿಷ ಮುಟ್ಟಿಸಿ ಸುಮ್ಮನಾಗಿದ್ದಾರೆ. ವಿಷಯ ತಿಳಿದು ಕೂಡಲೇ ಅಲ್ಲಿಗೆ ಬಂದ ಪೋಷಕರು ಕಿರಣ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಿರಣ್ ಪ್ರಾಣಪಕ್ಷಿ ಹಾರಿಹೋಗಿದೆ. ಸದ್ಯ ಕಿರಣ್ ಪೋಷಕರು ತಮಗೆ ನ್ಯಾಯಬೇಕು ಎಂದು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com