ಬೆಂಗಳೂರು: ಆರ್ಎಸ್ಎಸ್ ಮುಖಂಡ ರುದ್ರೇಶ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹತ್ಯೆಯಲ್ಲಿ ಬಲಪಂಥೀಯ ವಿರೋಧಿ ಸೈದ್ಧಾಂತಿಕ ನಿಲುವು ಹೊಂದಿರುವ ಸಂಘಟನೆ ಹಾಗೂ ರಾಜಕೀಯ ಪಕ್ಷದ ಕೈವಾಡವಿರುವುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಿದೆ.
ಆಸ್ಟಿನ್ ಟೌನ್ನ ವಾಸೀಂ ಅಹಮದ್, ಜೆ.ಸಿ.ನಗರದ ಮೊಹಮ್ಮದ್ ಮಜರ್, ಆರ್.ಟಿ.ನಗರದ ಮೊಹಮ್ಮದ್ ಮುಜೀಬುಲ್ಲಾ ಅಲಿಯಾಸ್ ಮೌಲ, ಹಾಗೂ ಗೋವಿಂದಪುರದ ಇರ್ಫಾನ್ ಬಂಧಿತರಾಗಿದ್ದಾರೆ. ಇವರನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ರುದ್ರೇಶ್ ಮೇಲೆ ಕತ್ತಿಯಿಂದ ದಾಳಿ ನಡೆಸಿದ್ದು ನಾನೇ ಎಂದು ವಾಸೀಮ್ ಹೇಳಿದ್ದಾನೆ. ಈತ ಸಂಘಟನೆಯೊಂದರ ಮೂಲಕ ತರಬೇತಿ ಪಡೆದುಕೊಂಡಿದ್ದ ಎನ್ನಲಾಗಿದೆ, ಕೆಲ ಸಂಘಟನೆಗಳ ಸಭೆಗಳಿಗೆ ಆತ ಹಾಜರಾಗುತ್ತಿದ್ದ ಎಂದು ವಾಸೀಂ ಕುಟುಂಬಸ್ಥರು ತಿಳಿಸಿದ್ದಾರೆ. ಎರಡು ಕೋಮಿನ ನಡುವೆ ಗಲಭೆ ಸೃಷ್ಟಿಸಲು ತಯಾರಿ ನಡೆಸುತ್ತಿದ್ದರು ಎಂಬುದರ ಬಗ್ಗೆ ಸಾಕ್ಷ್ಯ ಕಲೆ ಹಾಕುತ್ತಿರುವುದಾಗಿ ಪೋಲೀಸರು ತಿಳಿಸಿದ್ದಾರೆ.
ಆರೋಪಿ ವಾಸೀಂ ರುದ್ರೇಶ್ ಹತ್ಯೆಯ ಎರಡು ದಿನಗಳ ನಂತರ ಕೇರಳಕ್ಕೆ ಭೇಟಿ ನೀಡಿದ್ದಾನೆ, ಜೊತೆಗೆ ಆಂಧ್ರ ಪ್ರದೇಶದ ಕುಪ್ಪಂ ಗೂಭೇಟಿ ನೀಡಿ ಅಲ್ಲಿ ಕೆಲವರನ್ನು ಸಂಪರ್ಕಿಸಿ ಬಂದಿದ್ದಾನೆ. ಆರೋಪಿ ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ನಡೆಯುತ್ತಿದ್ದ ಹಲವು ಸಂಘಟನೆಗಳ ಶಿಬಿರದಲ್ಲಿ ಪಾಲ್ಗೋಂಡು ತರಬೇತಿ ಪಡೆಯುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರುದ್ರೇಶ್ ಕೊಲೆ ಪ್ರಕರಣದಲ್ಲಿ ಬೇರೆ ಯಾರ ಕೈವಾಡವಿದೆಯ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮತ್ತಷ್ಟು ಹೆಚ್ಚಿನ ಮಾಹಿತಿ ಕಲೆ ಹಾಕಲು ಇನ್ನೆರಡು ದಿನ ಸಮಯಾವಕಾಶ ಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಸೀಂ ಮುಗ್ಧ, ಘಟನೆ ನಡೆದಾಗ ಆತ ಮನೆಯಲ್ಲಿಯೇ ಇದ್ದು ಟಿವಿ ನೋಡುತ್ತಿದ್ದ ಎಂದು ವಾಸೀಂ ಪೋಷಕರು ಹೇಳಿದ್ದಾರೆ. ಆತ ಮುಗ್ದ ಎಂಬುದನ್ನು ಸಾಬೀತು ಪಡಿಸಲು ಕಾನೂನಿನ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.
Advertisement