ಬೆಂಗಳೂರು: ಕಾವೇರಿ ವಿವಾದ ಕುರಿತಂತೆ ಸುಪ್ರೀಂ ನೀಡಿದ್ದ ತೀರ್ಪು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಾಕಷ್ಟು ಸಭೆಗಳನ್ನು ನಡೆಸಲಾಗಿತ್ತು. ಇದರಂತೆ ಬುಧವಾರ ರಾತ್ರಿ ನಡೆದ ಸರ್ವಪಕ್ಷ ಸಭೆಯಲ್ಲೂ ಎಲ್ಲಾ ಪಕ್ಷದ ನಾಯಕರು ಒಮ್ಮತದಿಂದ ತಮಿಳುನಾಡಿಗೆ ನೀರನ್ನು ಬಿಡಬಾರದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಎಲ್ಲಾ ಪಕ್ಷದ ನಾಯಕರು ಒಮ್ಮತದಿಂದ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಕೂಡ ಅಭಿಪ್ರಾಯಗಳ ಮೇರೆಗೆ ಸುಪ್ರೀಂ ತೀರ್ಪನ್ನು ಪಾಲನೆ ಮಾಡದಿರಲು ನಿರ್ಧರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿವೆ.
ಮಂಗಳವಾರವಷ್ಟೇ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್ ಮತ್ತೆ ಕರ್ನಾಟಕ ರಾಜ್ಯದ ವಿರುದ್ಧವಾಗಿಯೇ ತೀರ್ಪನ್ನು ಹೊರಹಾಕಿತ್ತು. ಸೆಪ್ಟೆಂಬರ್ 21 ರಿಂದ 27ರವರೆಗೂ ಪ್ರತೀನಿತ್ಯ 6 ಸಾವಿರ್ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಇದರಂತೆ ಸರ್ವಪಕ್ಷ ಸಭೆ ಸುಪ್ರೀಂ ತೀರ್ಪವನ್ನು ನಿರಾಕರಿಸಿದ್ದು, ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುವ ಶಕ್ತಿ ರಾಜ್ಯಕ್ಕೆ ಇದೆ ಅಥವಾ ಇಲ್ಲ ಎಂಬುದು ಇಲ್ಲಿ ಬರುವುದಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ತೀರ್ಪನ್ನು ಪಾಲನೆ ಮಾಡದಿದ್ದಲ್ಲಿ ಸಹಜವಾಗಿಯೇ ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಇದೀಗ ಕಾನೂನು ತಜ್ಞರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ನ್ಯಾಯಾಂಗ ನಿಂದನೆ ಯಾವ ಕಡೆಯಿಂದಾದರೂ ಹೋಗಬಹುದು. ಆದೇಶವನ್ನು ಪಾಲನೆ ಮಾಡದೆ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡದಿದ್ದರೆ, ಯಾರೂ ಬೇಕಾದರೂ ಸುಪ್ರೀಂನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲವೇ, ಸ್ವತಃ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಅನಕ್ಷರಸ್ಥರಂತೆ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ. ಸುಪ್ರೀಂ ತೀರ್ಪು ಕುರಿತಂತೆ ಮೊದಲು ಸರ್ವ ಪಕ್ಷ ಸಭೆಯನ್ನು ಕರೆದು ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ್ದಾರೆ. ಹಾಗೆಯೇ ನಿರ್ಧಾರ ಕೈಗೊಳ್ಳಲು ವಿಧಾನಮಂಡಲ ಅಧಿವೇಶನವನ್ನು ಕರೆದಿದ್ದಾರೆಂದು ಇನ್ನೂ ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕೆಟ್ಟ ಬೆಳವಣಿಗೆಗಳನ್ನು ಎದುರಿಸಬೇಕಾಗುತ್ತದೆ. ನ್ಯಾಯಾಲಯದ ಆದೇಶವನ್ನು ಸರ್ಕಾರವೇ ಪಾಲನೆ ಮಾಡದಿದ್ದರೆ, ನಾಗರೀಕರು ಹೇಗೆ ಪಾಲನೆ ಮಾಡುತ್ತಾರೆ. ಸರ್ಕಾರದ ಆದೇಶವನ್ನು ಜನರು ಪಾಲನೆ ಮಾಡುತ್ತಾರೆಯೇ? ಎಂದು ಹಿರಿಯ ವಕೀಲರೊಬ್ಬರು ಪ್ರಶ್ನಿಸಿದ್ದಾರೆ.
ನ್ಯಾಯಾಲಯ ನಿಂದನೆಯಾಗಿರುವುದು ಕಂಡು ಬಂದಿದ್ದೇ ಆದರೆ, ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಕಾರ್ಯದರ್ಶಿಗಳಿಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಗೆ ಮತ್ತೊಬ್ಬ ವಕೀಲರು ಪ್ರತಿಕ್ರಿಯೆ ನೀಡಿದ್ದು, ಕಾವೇರಿ ವಿವಾದ ಕುರಿತಂತೆ ತೆಗೆದುಕೊಳ್ಳುವ ನಿರ್ಧಾರವೇನಿದ್ದರೂ ಸರ್ಕಾರಕ್ಕೆ ಸಂಬಂಧಿಸಿದ್ದು, ಸರ್ಕಾರವೇ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಮುಖ್ಯ ಕಾರ್ಯದರ್ಶಿಗಳು ಸ್ವಂತವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ವಾದಿಸಿದ್ದಾರೆ.
Advertisement