ಬೆಂಗಳೂರು: ಬೆಂಗಳೂರು, ಮಂಡ್ಯ ಸೇರಿದಂತೆ ಕರ್ನಾಟಕದ ಹಲವೆಡೆ ಮಂಗಳವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಇಂದು ಬೆಳಗ್ಗೆ ಸುಮಾರು 7.45 ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವಾಗಿದ್ದು, ರಾಜಧಾನಿ ಬೆಂಗಳೂರಿನ ಗಿರಿನಗರ, ಕಾಮಾಕ್ಷಿ ಪಾಳ್ಯ. ಕೆಂಗೇರಿಯ ಕಾರುಬೆಲೆ ಮತ್ತು ಮಾಗಡಿ ರಸ್ತೆಯಲ್ಲಿ ಭೂಮಿ ಕಂಪಿಸಿದೆ. ಅಂತೆಯೇ ಮಂಡ್ಯದ ಮದ್ದೂರು ತಾಲ್ಲೂಕಿನ ಮರಳಿಗ, ಒಕ್ಕರ ಹಳ್ಳಿ, ಹೊನಗಹಳ್ಳಿ, ಮಳವಳ್ಳಿಯ ಹಲಗೂರು, ನಾಗೇಗೌಡನದೊಡ್ಡಿ, ಮಂಡ್ಯ ತಾಲ್ಲೂಕಿನ ಅಲ್ಕರೆಯಲ್ಲೂ ಭೂಕಂಪನದ ಅನುಭವವಾಗಿದೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ.
ಇನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ರಾಜು ನಗರದದಲ್ಲಿ, ರಾಮನಗರ, ಚನ್ನಪಟ್ಟಣ, ಕನಕಪುರದಲ್ಲಿ ಮತ್ತು ತುಮಕೂರಿನ ಕುಣಿಗಲ್ ತಾಲ್ಲೂಕಿನ ಬೆಟ್ಟಳ್ಳಿ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಯಾವ ಭಾಗದಲ್ಲೂ ಭೂಕಂಪನವಾದ ಕುರಿತು ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ: ಹವಾಮಾನ ಇಲಾಖೆ ಸ್ಪಷ್ಟನೆ
ಇನ್ನು ಭೂಕಂಪನದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಹವಾಮಾನ ಇಲಾಖೆ ರಾಜ್ಯದ ಯಾವುದೇ ಭಾಗದಲ್ಲೂ ಭೂಕಂಪನವಾದ ಕುರಿತು ರಿಕ್ಟರ್ ಮಾಪಕದಲ್ಲಿ ಮಾಹಿತಿ ದಾಖಲಾಗಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕಿ ಡಾ.ಲಕ್ಷ್ಮಮ್ಮ ಅವರು, ರಾಜ್ಯದ ಯಾವುದೇ ಭಾಗದಲ್ಲೂ ಭೂಕಂಪನವಾಗಿಲ್ಲ. ರಿಕ್ಚರ್ ಮಾಪಕದಲ್ಲೂ ಭೂಮಿ ಕಂಪಿಸಿದ ಕುರಿತು ಮಾಹಿತಿ ದಾಖಲಾಗಿಲ್ಲ. ರಿಕ್ಚರ್ ಮಾಪಕದಲ್ಲಿನ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಭೂಮಿ ಕಂಪಿಸಿದರೆ ಅದು ದಾಖಲಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಿದ್ದಾರೆ.
Advertisement