ಕೊಪ್ಪಳ: ಇಲ್ಲಿನ ಹಲಗೆರಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ 8 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ಸು ಬೆಂಕಿಗೆ ಆಹುತಿಯಾಗಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಬಸ್ಸು ಬೆಂಗಳೂರಿನಿಂದ ಗದಗ್ ಜಿಲ್ಲೆಯ ಮುಂಡರಗಿಗೆ ಸಾಗುತ್ತಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಆಗಮಿಸಿದ್ದರಿಂದ ಅನಾಹುತವನ್ನು ತಪ್ಪಿಸಲಾಯಿತು. ಸಿಬ್ಬಂದಿ ಪ್ರಯಾಣಿಕರನ್ನು ರಕ್ಷಿಸಿ ಬೆಂಕಿಯನ್ನು ನಂದಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಬಟ್ಟೆಗಳು ಬೆಂಕಿಗೆ ಸುಟ್ಟುಹೋಗಿವೆ. ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಬೆಂಕಿ ಹತ್ತಿ ಉರಿಯಲು ಕಾರಣವೇನೆಂಬುದು ತಿಳಿದುಬಂದಿಲ್ಲ. ನಂತರ ಪ್ರಯಾಣಿಕರಿಗೆ ಪ್ರಯಾಣಿಸಲು ಬೇರೆ ವ್ಯವಸ್ಥೆ ಮಾಡಲಾಯಿತು.