
ಮಂಗಳೂರು: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಎಂಡೋ ಸಲ್ಫಾನ್ ದುರಂತದ ಸಂತ್ರಸ್ಥರ ಭವಣೆ ನೀಗುವ ಲಕ್ಷಣಗಳೇ ಗೋಚರಿಸಿದೇ ಸಂತ್ರಸ್ಥರು ಆತ್ಮಹತ್ಯೆಯತ್ತ ಮುಖ ಮಾಡುವಂತಾಗಿದೆ ಎಂದು ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಶ್ರೀಧರ್ ಗೌಡ ಅವರು ತಿಳಿಸಿದ್ದಾರೆ.
ಭಾರಿ ಪ್ರಮಾಣದ ಪ್ರತಿಭಟನೆಯ ಹೊರತಾಗಿಯೂ ರಾಜ್ಯ ಸರ್ಕಾರ ತಮ್ಮತ್ತ ತಿರುಗಿ ನೋಡುತ್ತಿಲ್ಲ. ಕನಿಷ್ಠ ಪಕ್ಷ ತಮ್ಮ ಸಮಸ್ಯೆಯನ್ನು ಆಲಿಸುವ ಕಾರ್ಯವನ್ನೂ ಮಾಡುತ್ತಿಲ್ಲ. ಹೀಗಾಗಿ ಎಂಡೋ ಸಲ್ಫಾನ್ ಸಂತ್ರಸ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದು ಶ್ರೀಧರ್ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
"2015 ನವೆಂಬರ್ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವ್ಯಾಪಕ ಪ್ರತಿಭಟನೆ ನಡೆಸಿದ್ದೆವು. ಆದರೆ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅನಿವಾರ್ಯವಾಗಿ ಪ್ರತಿಭಟನೆ ಕೈ ಬಿಟ್ಟಿದ್ದೆವು. ಇದಾದ ಬಳಿಕ ಬಾಬ ಗೌಡ ಆತ್ಮಹತ್ಯೆ ಶರಣಾಗಿದ್ದರು. ಆತ್ಮಹತ್ಯೆ ಮಾಡಿಕೊಂಡ ಎಂಡೋಸಲ್ಫಾನ್ ಸಂತ್ರಸ್ಥರ ಪೈಕಿ ಬಾಬು ಗೌಡ ಆರನೆಯವರಾಗಿದ್ದು, ಈ ಘಟನೆ ಬಳಿಕವೂ ಸರ್ಕಾರ ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಮಾಸಾಶನ, ಬಸ್ ಪಾಸ್ ಸೌಲಭ್ಯ ಬಿಟ್ಟರೆ ಬೇರಾವ ಸೌಲಭ್ಯ ಸಿಕ್ಕಿಲ್ಲ. ಪೆರಾಬೆ, ಪಟ್ರಮೆ ಸಹಿತ 3 ಕಡೆ ಆತ್ಮಹತ್ಯೆ ನಡೆದಿದೆ.ಆದರೆ ಸಂತ್ರಸ್ಥರ ಅಂತಿಮ ಪರಿಹಾರ ಆತ್ಮಹತ್ಯೆ ಎಂಬ ಸ್ಥಿತಿಗೆ ಬಂದಿದ್ದಾರೆ ಎಂದು ಶ್ರೀಧರ್ ಗೌಡ್ ಹೇಳಿದ್ದಾರೆ.
1985 ರಿಂದ 1999ರ ತನಕ ಜಿಲ್ಲೆಯ 104 ಗ್ರಾಮಗಳಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯಾಪ್ತಿಯ ಗೇರು ತೋಟಗಳಿಗೆ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಸಿಂಪಡಿಸಲಾಯಿತು. ಅನಂತರದ ಪರಿಣಾಮವಾಗಿ ಆ ಗ್ರಾಮಗಳಲ್ಲಿ ಹುಟ್ಟಿದ ಹಲವು ಮಕ್ಕಳು ಶಾಶ್ವತ ಅಂಗವೈಕಲ್ಯವನ್ನು ಹೊಂದಿದ್ದರೆ, ಅನೇಕರಿಗೆ ನಾನಾ ಬಗೆಯ ಕಾಯಿಲೆಗಳು ಆರಂಭವಾದವು. ಸರ್ಕಾರವೇ ಹೇಳಿದಂತೆ ಇದರ ಪರಿಣಾಮ 142 ಕಾಯಿಲೆಗಳು ಬಾಧಿಸುತ್ತಿವೆ. ಒಂದು ಕುಟುಂಬದಲ್ಲಿ ಓರ್ವ ಇದರಿಂದ ಬಳಲುತ್ತಿದ್ದರೆ, ಇಡೀ ಕುಟುಂಬದ ಬದುಕು ಸಮಸ್ಯೆಗೆ ಸಿಲುಕಿದಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 312 ಎಂಡೋ ಸಂತ್ರಸ್ತ ಕುಟುಂಬಗಳಿದ್ದು, ಅವುಗಳಲ್ಲಿ 3,115 ಮಂದಿ ಎಂಡೋ ಪೀಡಿತರಿದ್ದಾರೆ. ಪುತ್ತೂರಿನಲ್ಲಿ 32, ಬೆಳ್ತಂಗಡಿಯಲ್ಲಿ 18 ಕುಟುಂಬಗಳಿವೆ. ಒಟ್ಟು 104 ಗ್ರಾಮಗಳು ಈ ದುರಂತದ ವ್ಯಾಪ್ತಿಯೊಳಗಿವೆ. 1,500 ಕ್ಕೂ ಅಧಿಕ ಮಂದಿ ಕ್ಯಾನ್ಸರ್, ಬಂಜೆತನ, ಪಾರ್ಶ್ವವಾಯು ಸೇರಿದಂತೆ ಹತ್ತಾರು ಕಾಯಿಲೆಗಳಿಂದ ನರಳುತ್ತಿದ್ದಾರೆ. ದುರಂತವೆಂದರೆ 20 ವರ್ಷಗಳ ಬಳಿಕವೂ ಹುಟ್ಟುತ್ತಿರುವ ಮಕ್ಕಳಲ್ಲಿ ದುಷ್ಪರಿಣಾಮ ಕಾಣುತ್ತಿದೆ.
ಇನ್ನು ಎಂಡೋ ಸಂತ್ರಸ್ಥರಿಗಾಗಿ ರಾಜ್ಯ ಸರ್ಕಾರ 10 ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಸೇವೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಆಸ್ಪತ್ರೆಗಳಲ್ಲಿ ರೋಗ ಪೀಡಿತರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆಗೆ ಸರ್ಕಾರ ಸೂಚನೆ ನೀಡುವ ಮೂಲಕ ಎಂಡೋ ಸಂತ್ರಸ್ತರ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರೋಗ ಪೀಡಿತ ಗ್ರಾಮಗಳಲ್ಲಿ 24*7 ವೈದ್ಯಕೀಯ ಕೇಂದ್ರ ತೆರೆಯುವಂತೆ, ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆ, ಸಂತ್ರಸ್ಥ ಕುಟುಂಬಗಳಿಗೆ 3ರಿಂದ 5 ಲಕ್ಷ ಪರಿಹಾರ ಧನ ಮತ್ತು 500 ಬೆಳೆ ನಷಟ ಪರಿಹಾರ ನೀಡುವಂತೆ ವೈಶಾಲಿ ಹೆಗ್ಡೆ ಅವರ ಸಮಿತಿ ಶಿಫಾರಸ್ಸು ಮಾಡಿತ್ತು. ಆದರೆ ಸಮಿತಿ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರ ಕಾರ್ಯರೂಪಕ್ಕೆ ತಂದಿಲ್ಲ ಎಂದೂ ಶ್ರೀಧರ್ ಗೌಡ ಆರೋಪಿಸಿದ್ದಾರೆ.
Advertisement