ಸಾವಿರಾರು ಕಲಾ ಪ್ರೇಮಿಗಳ ಆಕರ್ಷಿಸಿದ ಚಿತ್ರಸಂತೆ!

ಭಾನುವಾರ ಬೆಂಗಳೂರಿನ ಕುಮಾರ ಕೃಪಾ ರಸ್ತೆ ಕಲಾ ರಸಿಕರಿಂದ ತುಂಬಿ ತುಳುಕುತ್ತಿತ್ತು. ಸಾವಿರಾರು ಚಿತ್ರ ಪ್ರೇಮಿಗಳು ವಿವಿಧ ಕಲಾವಿದರು ರಚಿಸಿದ್ದ ವಿವಿಧ ಕಲಾಕೃತಿಗಳನ್ನು ಕೊಂಡರೆ, ಮತ್ತೆ ಕೆಲವರು ಅವುಗಳ ಸೌಂದರ್ಯವನ್ನು ನೋಡಿಯೇ ಆಸ್ವಾಧಿಸಿದರು.
ಚಿತ್ರಸಂತೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಚಿತ್ರಸಂತೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಭಾನುವಾರ ಬೆಂಗಳೂರಿನ ಕುಮಾರ ಕೃಪಾ ರಸ್ತೆ ಕಲಾ ರಸಿಕರಿಂದ ತುಂಬಿ ತುಳುಕುತ್ತಿತ್ತು. ಸಾವಿರಾರು ಚಿತ್ರ ಪ್ರೇಮಿಗಳು ವಿವಿಧ ಕಲಾವಿದರು ರಚಿಸಿದ್ದ ವಿವಿಧ ಕಲಾಕೃತಿಗಳನ್ನು ಕೊಂಡರೆ, ಮತ್ತೆ ಕೆಲವರು ಅವುಗಳ  ಸೌಂದರ್ಯವನ್ನು ನೋಡಿಯೇ ಆಸ್ವಾಧಿಸಿದರು.

ಇದಕ್ಕೆಲ್ಲಾ ವೇದಿಕೆ ಕಲ್ಪಿಸಿದ್ದು ಚಿತ್ರಕಲಾ ಪರಿಷತ್. ಪ್ರತೀ ವರ್ಷದಂತೆ ಈ ಬಾರಿಯೂ ಚಿತ್ರಕಲಾ ಪರಿಷತ್ ವತಿಯಿಂದ ಇಂದು ಚಿತ್ರಸಂತೆ ನಡೆಯಿತು. ದೇಶದ 16 ರಾಜ್ಯಗಳಿಂದ ಆಗಮಿಸಿದ್ದ ಸುಮಾರು 1400 ಕಲಾವಿದರು  ರಚಿಸಿದ್ದ ಸುಮಾರು 80 ಸಾವಿರ ಕಲಾಕೃತಿಗಳು ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಆವರಣ ಹಾಗೂ ರಸ್ತೆಗಳಲ್ಲಿ ಪ್ರದರ್ಶನಗೊಂಡವು. ಕೇವಲ ಪ್ರದರ್ಶನ ಮಾತ್ರವಲ್ಲದೇ ಮಾರಾಟಕ್ಕೂ ಅನುವು  ಮಾಡಿಕೊಟ್ಟಿದ್ದರಿಂದ ಕಲಾ ಪ್ರೇಮಿಗಳು ತಮಗಿಷ್ಟವಾದ ಕಲಾಕೃತಿಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು.

ಸ್ಥಳದಲ್ಲೇ ಚಿತ್ರ ಬಿಡಿಸಿಕೊಡುವ ಕಲಾವಿದರು ಸೇರಿದಂತೆ ವರ್ಣ, ತೈಲ, ರೇಖಾಚಿತ್ರ, ಹೀಗೆ ನಾನಾ ಪ್ರಕಾರಗಳ ಕಲಾವಿದರು ಚಿತ್ರಸಂತೆಯಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿದರು. ಮಕ್ಕಳಿಂದ ಹಿಡಿದು ದೊಡ್ಡವರೆ  ಸೆಳೆಯುವ ಕೃತಿಗಳು ಅನಾವರಣಗೊಂಡಿದ್ದವು. ಚಿತ್ರ ಸಂತೆಯಲ್ಲಿ ನೂರು ರುಪಾಯಿಯಿಂದ ಹಿಡಿದು ಕೋಟಿ ರುಪಾಯಿವರೆಗೂ ಬೆಲೆಬಾಳುವ ಕೃತಿಗಳು ಕಲಾ ಪ್ರೇಮಿಗಳ ಆಕರ್ಷಿಸಿದವು. ಚಿತ್ರಕಲಾ ಪರಿಷತ್‌ನ ಒಳಗೆ  ಚಿತ್ರಸಂತೆಯ ಅಂಗವಾಗಿ ಇದೇ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.  ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಗಳವರೆಗೂ ಚಿತ್ರಸಂತೆಗೆ ಅನುವು ಮಾಡಿಕೊಡಲಾಗಿತ್ತು.

ಚಿತ್ರ ಸಂತೆ ಉದ್ಘಾಟನೆ ಮಾಡಿದ ಸಿಎಂ
ಇನ್ನು 2017ನೇ ಸಾಲಿನ ಚಿತ್ರಸಂತೆಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಬೆಳಗ್ಗೆ ಚಿತ್ರಕಲಾ ಪರಿಷತ್ ಗೆ ಆಗಮಿಸಿದ ಸಿದ್ದರಾಮಯ್ಯ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಬಿಳಿ  ಕಾಗದದ ಮೇಲೆ ಬರೆಯುವ ಮೂಲಕ ಚಿತ್ರಸಂತೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಸೇರಿದಂತೆ ಹಲವು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com