ಪಠ್ಯ ಪರಿಷ್ಕರಣೆ ವಿರುದ್ಧ ಬಿಜೆಪಿ ಕಾನೂನು ಸಮರ; ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಸಾಧ್ಯತೆ!

ರಾಜ್ಯ ಸರ್ಕಾರದ ಉದ್ದೇಶಿತ ಪಠ್ಯ ಪರಿಷ್ಕರಣೆ ವಿಚಾರ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರದ ಈ ದಿಢೀರ್ ಕ್ರಮದ ವಿರುದ್ಧ ರಾಜ್ಯ ಬಿಜೆಪಿ ಘಟಕ ಕಾನೂನು ಸಮರಕ್ಕೆ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರದ ಉದ್ದೇಶಿತ ಪಠ್ಯ ಪರಿಷ್ಕರಣೆ ವಿಚಾರ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರದ ಈ ದಿಢೀರ್ ಕ್ರಮದ ವಿರುದ್ಧ ರಾಜ್ಯ ಬಿಜೆಪಿ ಘಟಕ ಕಾನೂನು ಸಮರಕ್ಕೆ ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರ ರಹಸ್ಯವಾಗಿ ಪಠ್ಯ ಪರಿಷ್ಕರಣೆ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ  ಹೈಕೋರ್ಟ್ ಮಧ್ಯ ಪ್ರವೇಶಿಸಿ ಪಠ್ಯ ಪರಿಷ್ಕರಣೆ  ಪ್ರಕ್ರಿಯೆಗೆ ಬ್ರೇಕ್ ಹಾಕಬೇಕು ಎಂದು ಬಿಜೆಪಿ ಮನವಿ ಮಾಡಿದೆ. ಈ ಬಗ್ಗೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವದಾಗಿಯೂ ಬಿಜೆಪಿ ಹೇಳಿದೆ.

ಗುರುವಾರ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಶಿಕ್ಷಾ ಬಚಾವೋ ಆಂದೋಲನಾ ಸಮಿತಿ ಹಮ್ಮಿಕೊಂಡಿದ್ದ ನಡೆದ ದುಂಡು ಮೇಜಿನ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಬಿಜೆಪಿ ಪಕ್ಷದ ಸದಸ್ಯರು, ಮಾಜಿ ಎಂಎಲ್ ಸಿಗಳು,  ಶಿಕ್ಷಕರು, ಪದವೀದರ ಕ್ಷೇತ್ರದ ಸದಸ್ಯರು ಹಾಗೂ ಶಿಕ್ಷಕ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೆ ಸರ್ಕಾರದ ಪಠ್ಯ ಪರಿಷ್ಕರಣಾ ಕ್ರಮವನ್ನು ಒಕ್ಕೋರಲಿನಿಂದ ವಿರೋಧಿಸಿದ ಸದಸ್ಯರು ಸರ್ಕಾರದ ಕ್ರಮವನ್ನು  ಹೈಕೋರ್ಟ್ ನಲ್ಲಿ ಪ್ರಶ್ನಿಸುವು ತೀರ್ಮಾನ ಕೈಗೊಂಡರು.

ರಾಜ್ಯದಲ್ಲಿ ಪ್ರಸ್ತುತ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಎನ್​ಸಿಇಆರ್​ಟಿಯ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹಾಗೂ ಕರ್ನಾಟಕ ಪಠ್ಯಕ್ರಮ ಚೌಕಟ್ಟು ಆಧಾರದಲ್ಲಿ ಪಠ್ಯಕ್ರಮ ರೂಪಿಸಿ ಪಠ್ಯ ಪುಸ್ತಕ ರಚಿಸಲಾಗುತ್ತಿದೆ.  ಪಠ್ಯಪುಸ್ತಕ ಪರಿಷ್ಕರಣೆಗೆ 2014ರಲ್ಲಿ ರಾಜ್ಯ ಸರ್ಕಾರ ಡಾ. ಬರಗೂರು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ತರಲು ಕರಡು ಪ್ರತಿ ಪ್ರಕಟಿಸಿರುವ ಸಂದರ್ಭದಲ್ಲಿ ಸಮಿತಿಯು 2005ರ  ಎನ್​ಸಿಎಫ್ ಆಧಾರಿತ ಪಠ್ಯಪುಸ್ತಕ ಮುದ್ರಿಸಿ ವಿದ್ಯಾರ್ಥಿಗಳಿಗೆ ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಪಠ್ಯಪುಸ್ತಕ ರೂಪಿಸಬೇಕು  ಎಂದು ಸಭೆ ಸದಸ್ಯರು ಒತ್ತಾಯಿಸಿದರು.

ಇದೇ ವೇಳೆ ಪಠ್ಯ ಪರಿಷ್ಕರಣೆ ಸಮಿತಿಯಲ್ಲಿರುವವರು ವಿಚಾರವಾದಿ, ಮೌಢ್ಯಪ್ರತಿಬಂಧಕ ಕಾಯ್ದೆ ಸಮಿತಿಯಲ್ಲಿದ್ದ ಸದಸ್ಯರಾಗಿದ್ದಾರೆ ಎಂದು ಸಭೆಯಲ್ಲಿ ಟೀಕಿಸಲಾಯಿತು.

ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಅವರು, ಪರಿಷ್ಕೃತ ಪಠ್ಯದ ಮುದ್ರಣಕ್ಕೆ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಬಿಡುಗಡೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಮತ್ತು  ಪಾಲಕರು ಗೊಂದಲದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು. ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಪ್ರೊ.ಪಿ.ವಿ.ಕೃಷ್ಣ ಭಟ್ ಅವರು ಮಾತನಾಡಿ  ನಾವು ಕೇಸರೀಕರಣ ಅಥವಾ ಬಂಡಾಯದ ವಿರುದ್ಧ ಮಾತನಾಡುತ್ತಿಲ್ಲ. ಪಠ್ಯ  ಪುಸ್ತಕವನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ವ್ಯಾಪ್ತಿಯಲ್ಲಿ ರಚಿಸಲಾಗಿದೆಯೇ? ಎಂಬುದರ ಕುರಿತು ಶೀಘ್ರದಲ್ಲೇ ಪಿಐಎಲ್ ಹಾಕುವ ಮೂಲಕ ಕಾನೂನು ಹೋರಾಟ ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ಇನ್ನು ನೇರವಾಗಿ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರನ್ನೇ ಪ್ರಶ್ನಿಸಿದ ಚಿಂತಕಿ ಎಸ್ ಆರ್ ಲೀಲಾ ಅವರು, ಬರಗೂರು ವೈಚಾರಿಕ, ಸೈದ್ಧಾಂತಿಕ, ಕಟಕಪುಕ ಎಂದು ಮಾತನಾಡುತ್ತಾರೆ. ಅವರ ಪ್ರಕಾರ  ‘ಮಾತೃಭೂಮಿ’ ಎಂಬ ಪದ ಬಳಕೆಯೇ ಕೇಸರೀಕರಣವೇ? ಕನ್ನಡವನ್ನೇ ಸರಿಯಾಗಿ ಉಚ್ಚಾರಣೆ ಮಾಡಲು ಬಾರದವರಿಂದ ಕನ್ನಡ ಪಠ್ಯಪುಸ್ತಕ ರಚಿಸಿರುವುದು ದುರಂತ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com