ಮಂಗಳೂರು: ಕಡಲ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿ ನಿರತವಾಗಿದ್ದ ಬಾರ್ಜ್ ಅಪಾಯಕ್ಕೆ ಸಿಲುಕಿ ಮುಳಗಡೆಯಾಗುತ್ತಿದ್ದು, ಬಾರ್ಜ್ ನಲ್ಲಿರುವ ಸಿಬ್ಬಂದಿಗಳನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ಧ ವಾಗಿದ್ದು, ಉಲ್ಲಾಳದ ಮೊಗವೀರಪಟ್ಣ ಸಮೀಪ ಕಡಲ ಕೊರೆತ ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ನಿರತವಾಗಿದ್ದ ಬಾರ್ಜ್ ಇದರಲ್ಲಿ ಸಿಲುಕಿಕೊಂಡಿದೆ. ಬಾರ್ಜ್ ನಿನ್ನೆ ಮಧ್ಯಾಹ್ನ ಅಪಾಯಕ್ಕೆ ಸಿಲುಕಿದ್ದು, ನಿನ್ನೆಯಿಂದಲೇ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಬಾರ್ಜ್ ನಲ್ಲಿದ್ದ ಸಿಬ್ಬಂದಿ ಶನಿವಾರ ಮಧ್ಯಾಹ್ನ ರಕ್ಷಣೆ ಕೋರಿ ಸಂದೇಶ ರವಾನಿಸಿದ್ದರು. ಆದರೆ ಸಮುದ್ರ ಪ್ರಕ್ಷುಬ್ಧವಾಗಿದ್ದ ಕಾರಣ ಅದರಲ್ಲಿದ್ದ ಕಾರ್ಮಿಕರನ್ನು ದಡಕ್ಕೆ ಕರೆತರಲು ಬೋಟ್ಗಳನ್ನು ಕಳುಹಿಸಲು ಅಸಾಧ್ಯ ವಾಗಿತ್ತು. ಈ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ಗೆ ಮಾಹಿತಿ ನೀಡಲಾಯಿತು.
ಕೂಡಲೇ ಕಾರ್ಯಪ್ರವೃತ್ತರಾದ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾದರು. ಆದರೆ ಭಾರಿ ಪ್ರಮಾಣದ ಅಲೆಗಳು ಎಳುತ್ತಿದ್ದರಿಂದ ಅವರ ನೌಕೆ ತೆರಳು ಸಾಧ್ಯವಾಗಲಿಲ್ಲ. ಹೀಗಾಗಿ ನಾಲ್ಕು ಡಿಂಗಿ (ಸಣ್ಣ ಗಾತ್ರದ ಫೈಬರ್ ಬೋಟ್)ಗಳನ್ನು ಬಾರ್ಜ್ ಬಳಿಗೆ ಕಳುಹಿಸಿ ರಕ್ಷಣಾ ಕಾರ್ಯ ಆರಂಭಿಸಲಾಯಿತು. ಈ ವರೆಗೂ ಬಾರ್ಜ್ ನಲ್ಲಿದ್ದ 19 ಮಂದಿ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದ್ದು, ಇನ್ನೂ 8 ಮಂದಿ ಸಿಬ್ಬಂದಿ ಬಾರ್ಜ್ ನಲ್ಲಿ ಇದ್ದಾರೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಡಿಸಿಪಿಗಳಾದ ಕೆ. ಎಂ. ಶಾಂತರಾಜು ಮತ್ತು ಡಾ| ಸಂಜೀವ್ ಎಂ. ಪಾಟೀಲ್, ಎಸಿಪಿ ಶ್ರುತಿ, ತಹಸೀಲ್ದಾರ್ ಮಹಾದೇವಯ್ಯ ಮತ್ತು ಇತರ ಅಧಿಕಾರಿಗಳು, ಪೊಲೀಸರು ಉಳ್ಳಾಲ ಮೊಗವೀರ ಪಟ್ಣಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಕ್ಕೆ ಮಾರ್ಗದರ್ಶನ ನೀಡಿದರು.
2 ವರ್ಷಗಳಿಂದ ಕಾಮಗಾರಿ
ಬ್ರೇಕ್ ವಾಟರ್ ಕಾಮಗಾರಿ ಕಳೆದ 2 ವರ್ಷಗಳಿಂದ ನಡೆಯುತ್ತಿದೆ ಅಳಿವೆ ಬಾಗಿಲ ಬಳಿ ಹಳೇ ಬ್ರೇಕ್ವಾಟರ್ ನವೀಕರಣ, ಬಮ್ಸ್ (ಮರಳ ದಿಣ್ಣೆ)ರಚನೆ ಮತ್ತು 3ನೇ ಹಂತದಲ್ಲಿ ರೀಫ್ ಅಳವಡಿಸುವ ಕಾಮಗಾರಿ ನಡೆಯುತ್ತಿತ್ತು. 1 ವಾರದೊಳಗೆ ಕೆಲಸ ಪೂರ್ತಿಗೊಂಡು ಬಾರ್ಜ್ ಹೋಗುವುದರಲ್ಲಿತ್ತು. ಕೋಸ್ಟ್ಗಾರ್ಡ್ ಕಾರ್ಯಾಚರಣೆ ಸ್ಥಗಿತ ರಕ್ಷಣೆಗೆ ಹೋದ ಸಣ್ಣ ಬೋಟ್ ನಲ್ಲೂ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯವನ್ನು ಸ್ಥಗಿತಗೊಳಿಸಿದೆ. ಬಾರ್ಜ್ನಲ್ಲಿದ್ದ ನಾಲ್ವರನ್ನು ಬೋಟ್ ನಲ್ಲಿ ಕರೆದೊಯ್ದು ರಕ್ಷಣಾ ಹಡಗಿಗೆ ತಲುಪಿಸಿದ್ದಾರೆ. ಉಳಿದವರನ್ನು ಬೋಟ್ನಲ್ಲಿ ಕರೆದೊಯ್ಯುವಾಗ ಕಲ್ಲು ಬಡಿದು ಬೋಟ್ ನಲ್ಲಿ ತಾಂತ್ರಿಕ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಅದರಲ್ಲಿದ್ದವರನ್ನು ಮತ್ತೆ ಬಾರ್ಜ್ಗೆ ಬಿಡಲಾಗಿತ್ತು.
Advertisement