ಪಾರ್ಕಿಂಗ್ ವಿಚಾರಕ್ಕೆ ವಾಗ್ವಾದ; ಹಿರಿಯ ನಾಗರಿಕನ ಕಪಾಳಕ್ಕೆ ಹೊಡೆದ ಎಎಸ್ಐ
ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಎಎಸ್ಐ ಹಾಗೂ ಬೈಕ್ ಮಾಲೀಕನ ನಡುವೆ ಜಟಾಪಟಿ ನಡೆದಿದ್ದು, ವಾಹನ ಸವಾರನ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಎಎಸ್ಐ ಹಲ್ಲೆ ಮಾಡಿರುವ ಘಟನೆ ನಗರದ ಚಾಮರಾಜಪೇಟೆ...
ಪಾರ್ಕಿಂಗ್ ವಿಚಾರಕ್ಕೆ ವಾಗ್ವಾದ; ಹಿರಿಯ ನಾಗರಿಕನ ಕಪಾಳಕ್ಕೆ ಹೊಡೆದ ಎಎಸ್ಐ
ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಎಎಸ್ಐ ಹಾಗೂ ಬೈಕ್ ಮಾಲೀಕನ ನಡುವೆ ಜಟಾಪಟಿ ನಡೆದಿದ್ದು, ವಾಹನ ಸವಾರನ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಎಎಸ್ಐ ಹಲ್ಲೆ ಮಾಡಿರುವ ಘಟನೆ ನಗರದ ಚಾಮರಾಜಪೇಟೆ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.
ಉಮಾಪತಿ ಹಲ್ಲೆಗೊಳಗಾದ ವೃದ್ಧ. ನಗರದ ಚಾಮರಾಜಪೇಟೆ ಸಾಯಿ ಕೆಫೆ ಹೋಟೆಲ್ ಬಳಿ ಘಟನೆ ನಡೆದಿದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದಕ್ಕೆ ಸಂಬಂಧಿಸಿದಂತೆ ಎಎಸ್ಐ ಜೊತೆಗೆ ಗಲಾಟೆಯಾಗಿದೆ.
ತಮ್ಮ ಪುತ್ರನೊಂದಿಗೆ ಬಂದಿದ್ದ ಉಮಾಪತಿಯವರು ಬೈಕ್ ನ್ನು ಚಾಮರಾಜಪೇಟೆಯಲ್ಲಿರುವ ಸಾಯಿ ಕೆಫೆ ಬಳಿ ನಿಲ್ಲಿಸಿದ್ದಾರೆ. ನೋ ಪಾರ್ಕಿಂಗ್ ಸ್ಥಳವಾದ್ದರಿಂದ ಸಂಚಾರಿ ಪೊಲೀಸರು ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ.
ನಂತರ ಉಮಾಪತಿಯವರು ಪುತ್ರನೊಂದಿಗೆ ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಈ ವೇಳೆ ಸಬ್ ಇನ್ಸ್ ಪೆಕ್ಟರ್ ಹನುಮಂತರಾಯ ಅವರೊಂದಿಗೆ ಮಾತಿನ ಚಕಮಕಿ ನಡೆದಿದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ನಾವು ವಾಹನವನ್ನು ನಿಲ್ಲಿಸಿಲ್ಲ ಎಂದು ಉಮಾಪತಿಯವರು ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ. ನಂತರ ಹನುಮಂತರಾಯ ಅವರು ಉಮಾಪತಿಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಈ ದೃಶ್ಯಾವಳಿಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಹಲ್ಲೆಯ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡಿವೆ.
ಘಟನೆ ಬಳಿಕ ಉಮಾಪತಿಯವರು ಚಾಮರಾಜಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆಂದು ಪ್ರತ್ಯಕ್ಷದರ್ಶಿ ಗಂಗಾಧರ್ ಅವರು ಹೇಳಿದ್ದಾರೆ.