ಬೆಂಗಳೂರು: ಫೋಟೋಗ್ರಫಿ ಎಂದರೆ ಸಾಮಾನ್ಯವಾಗಿ ಬೆಟ್ಟ-ಗುಡ್ಡ, ಅರಣ್ಯ, ಪ್ರಾಣಿ, ಸಾಮಾನ್ಯರ ಜೀವನ ಎಂದು ಫೋಟೋಗಾಗಿ ಅಲೆಯುವ ಮಂದಿಯನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಟೆಕ್ಕಿ ಹೊಸ ಬಗೆಯ ಛಾಯಾಗ್ರಹಣ ವಿಧಾನಕ್ಕೆ ಮುಂದಾಗಿದ್ದು, ಇದು ವ್ಯಾಪಕ ವೈರಲ್ ಆಗಿದೆ.
ಇಷ್ಟಕ್ಕೂ ಯಾವುದೀ ಹೊಸ ಬಗೆಯ ಛಾಯಾಗ್ರಹಣ ಎಂದರೆ "ಘೋಸ್ಟ್ ಫೋಟೋಗ್ರಫಿ" ಅರ್ಥಾತ್ ದೆವ್ವಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಕಾರ್ಯ.. ಅಯ್ಯೊ ದೆವ್ವಾನಾ ಎಂದು ಹೌಹಾರುವ ಮಂದಿಯ ನಡುವೆ ಟೆಕ್ಕಿಯೊಬ್ಬ ಆ ದೆವ್ವಗಳ ಕುರಿತ ಫೋಟೋಗಳನ್ನು ತೆಗೆಯಲು ಮುಂದಾಗಿದ್ದಾರೆ. ದೆವ್ವಗಳ ಕಾಟವಿರುವ ಪ್ರದೇಶಗಳಿಗೆ ಹೋಗಿ ಈ ಟೆಕ್ಕಿ ಅವುಗಳ ಫೋಟೋಗಳನ್ನು ತೆಗೆಯಬೇಕೆಂತೆ. ಇಂತಹುದೊಂದು ವಿಚಿತ್ರ ಆಸೆಯೊಂದಿಗೆ ಟೆಕ್ಕಿಯ ತಂಡ ಕೂಡ ಸಿದ್ಧವಾಗಿದ್ದು, ಘೋಸ್ಟ್ ಫೋಟೋಗ್ರಫಿಗೆ ಸಿದ್ಧವಾಗಿ ನಿಂತಿದೆ.
ಮೂಲತಃ ಸಾಫ್ಟ್ ವೇರ್ ಉದ್ಯೋಗಿಯಾಗಿರುವ ವೆಂಕಟರಮಣ ಎಂಬುವವರು ಇಂತಹುದೊಂದು ಸಾಹಸಕ್ಕೆ ಕೈಹಾಕಿದ್ದು, ಹವ್ಯಾಸವಾಗಿ ಆರಂಭಿಸಿದ ಛಾಯಾಗ್ರಹಣವನ್ನು ಇದೀಗ ವೃತ್ತಿಪರವಾಗಿ ಸ್ವೀಕರಿಸಿದ್ದಾರೆ. ವೆಂಕಟರಮಣ ಅವರ ಬಳಿ ಇದೀಗ ಸುಮಾರು 300ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಫೋಟೋಗ್ರಫಿ ಕೋರ್ಸ್ ಕಲಿಯುತ್ತಿದ್ದಾರೆ. ಈ ಹಿಂದೆಲ್ಲಾ ಪರಿಸರ, ನಗರ ಜೀವನ, ಅರಣ್ಯ ಎಂದು ಸುತ್ತಾಡುತ್ತಿದ್ದ ವೆಂಕಟರಮಣ ಅವರಿಗೆ ಇದೀಗ ಅವೆಲ್ಲವೂ ಬೋರ್ ಆಗಿದ್ದು, ಹೊಸ ಬಗೆಯ ಫೋಟೋಗ್ರಫಿ ಬೇಕೆಂದು ಅನ್ನಿಸಿದೆ. ಇದೇ ಕಾರಣಕ್ಕೆ ಸಾಮಾನ್ಯವಲ್ಲದ ಫೋಟೋಗ್ರಫಿ ವಿಧಾನಕ್ಕೆ ಇವರು ಮುಂದಾಗಿದ್ದಾರೆ. ಇದಕ್ಕೆ ಅವರು ಆರಿಸಿಗೊಂಡಿದ್ದು, ಅತಿಮಾನುಷ ಶಕ್ತಿ ಅರ್ಥಾತ್ ದೆವ್ವಗಳ ಫೋಟೋಗ್ರಫಿಯನ್ನು..
ಈ ಬಗ್ಗೆ ಕುತೂಹಲದಿಂದಲೇ ಮಾತನಾಡಿರುವ ವೆಂಕಟ್, ಸಾಮಾನ್ಯವಾಗಿ ಅತಿಮಾನುಷ ಶಕ್ತಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಕಷ್ಟಸಾಧ್ಯ. ಕೆಲವರ ಅಭಿಪ್ರಾಯದಂತೆ ಅದು ಅಸಾಧ್ಯ. ಇದೇ ಕಾರಣಕ್ಕೆ ತಾವು ಇಂತಹ ಸವಾಲಿನ ಫೋಟೋಗ್ರಫಿಯನ್ನು ಆರಿಸಿಕೊಂಡಿದ್ದೇನೆ. ವೈಯುಕ್ತಿಕವಾಗಿ ನನಗೆ ಅತಿಮಾನುಷ ಶಕ್ತಿ ಅಂದರೆ ದೆವ್ವ ಭೂತಗಳಲ್ಲಿ ನಂಬಿಕೆ ಇದೆ. ಈ ಬಗ್ಗೆ ಇಂಟರ್ ನೆಟ್ ಸಾವಿರಾರು ವಿಡಿಯೋಗಳು ಹರಿದಾಡುತ್ತಿವೆ. ಆದರೆ ಇವಾವುದಕ್ಕೂ ನಿಖರ ದಾಖಲೆಗಳಿಲ್ಲ. ಇದೇ ಕಾರಣಕ್ಕೆ ನಮ್ಮ ತಂಡ ದೆವ್ವ ಭೂತಗಳ ಇರುವಿಕೆಯನ್ನು ಸಾಬೀತು ಪಡಿಸಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ.
ಇದಕ್ಕಾಗಿ ನಾವು ಸಾಕಷ್ಟು ಪೂರ್ವ ತಯಾರಿ ಕೂಡ ಮಾಡಿಕೊಂಡಿದ್ದು, ವಿಶೇಷ ಲೈಟಿಂಗ್ ವ್ಯವಸ್ಥೆ, ವಿಡಿಯೋ ಕ್ಯಾಮೆರಾ, ಆಡಿಯೋ ರೆಕಾರ್ಡರ್ ಗಳು ಹಾಗೂ ಕೆಲ ಆಧುನಿಕ ಯಂತ್ರಗಳನ್ನು ಸಂಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ. ಅಂತೆಯೇ ನಮ್ಮ ಮುಂದಿನ ಕಾರ್ಯಯೋಜನೆ ಬಗ್ಗೆ ನಮ್ಮ ವಾಟ್ಸಪ್ ಗ್ರೂಪಿನಲ್ಲಿ ನಾವು ಚರ್ಚಿಸಿದ್ದು, ಶೀಘ್ರದಲ್ಲೇ ಕಾರ್ಯಾಚರಣೆಗೆ ಇಳಿಯುತ್ತೇವೆ. ನಮಗೆ ಬಂದಿರುವ ಮಾಹಿತಿಯಂತೆ ಬೆಂಗಳೂರಿನ ಹೊರವಲಯದ ದೊಮ್ಮಲೂರು ಪ್ರದೇಶದಲ್ಲಿ ಅತಿಮಾನುಷ ಚಟುವಟಿಗಳ ಕುರಿತು ಮಾಹಿತಿ ಇದೆ. ಬಹುಶಃ ಇದೇ ನಮ್ಮ ಮೊದಲ ಕಾರ್ಯವಾಗಬಹುದು ಎಂದು ವೆಂಕಟ್ ಹೇಳಿದ್ದಾರೆ.
ವಿದೇಶದಲ್ಲಿ ಚಾಲ್ತಿಯಲ್ಲಿರುವ ಘೋಸ್ಟ್ ಫೋಟೋಗ್ರಫಿ ಭಾರತದಲ್ಲೂ ಇದೀಗ ಚಾಲ್ತಿಗೆ ಬರುತ್ತಿದ್ದು, ಈ ಹಿಂದೆ ಇದೇ ಅತಿಮಾನುಷ ಶಕ್ತಿಗಳ ಅನ್ವೇಷಣೆ ಮಾಡುತ್ತಿದ್ದ ದೆಹಲಿ ಮೂಲದ ಗೌರವ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿದ್ದರು.
Advertisement