ಬೆಂಗಳೂರು: ಮೇ ತಿಂಗಳ ಅಂತ್ಯದವರೆಗೂ ಬೆಂಗಳೂರಿಗರಿಗೆ ಕುಡಿಯುವ ನೀರಿನ ಕೊರತೆಯ ಭಯವಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆಯೇ ರಾಜ್ಯಾದ್ಯಂತ ಬರದ ವಾತಾವರಣ ನೆಲೆಯಾಗಿದ್ದು, ರಾಜಧಾನಿ ಬೆಂಗಳೂರಿನ ಪ್ರಮುಖ ನೀರಿನ ಮೂಲಗಳಲ್ಲಿ ಭಾರಿ ಪ್ರಮಾಣದ ನೀರಿನ ಕೊರತೆಯುಟಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದರ ಬೆನ್ನಲ್ಲೇ ನಿನ್ನೆ ಸಚಿವ ಕೆಜೆ ಜಾರ್ಜ್ ಅವರು, ನಗರದ ಶಾಸಕರು, ಎಂಎಲ್ ಸಿಗಳು, ಮೇಯರ್ ಹಾಗೂ ನೀರಾವರಿ ಸಚಿವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ನಗರಕ್ಕೆ ಬೇಕಾದ ನೀರಿನ ಪ್ರಮಾಣ ಹಾಗೂ ಪ್ರಸ್ತುತ ಇರುವ ನೀರಿನ ಪ್ರಮಾಣದ ಅಂಕಿ-ಅಂಶಗಳ ಮಾಹಿತಿ ಪಡೆದು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ.
ಈ ವೇಳೆ ಬೆಂಗಳೂರಿಗೆ ನೀರಿನ ಕೊರತೆ ಸುದ್ದಿಗಳ ಕುರಿತು ಮಾತನಾಡಿದ ಜಾರ್ಜ್ ಅವರು, ಪ್ರಸ್ತುತ ಮೇ ತಿಂಗಳ ಅಂತ್ಯದ ವರೆಗೂ ಕುಡಿಯುವ ನೀರಿನ ಕೊರತೆಯ ಭಯವಿಲ್ಲ. ಈಗಿರುವ ನೀರನ್ನು ನಿಯಮಿತವಾಗಿ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಂಡರೆ ಯಾವುದೇ ರೀತಿಯ ಭಯ ಪಡುವ ಆಗತ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ಸಭೆ ಕುರಿತಂತೆ ಮಾತನಾಡಿದ ಅವರು, ಕೆಲ ಶಾಸಕರು ಮತ್ತು ಎಂಎಲ್ ಸಿಗಳು ಖಾಸಗಿ ಟ್ಯಾಂಕರ್ ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದರೆ ಆಗ ಒಂದಷ್ಟು ಪ್ರಮಾಣದ ನೀರನ್ನು ಉಳಿಸಬಹುದು ಎಂದು ಸಲಹೆ ನೀಡಿದರು. ಆದರೆ ಬೆಂಗಳೂರು ಹೊರವಲಯದ ಕೆಲ ಪ್ರದೇಶಗಳು ಸಂಪೂರ್ಣವಾಗಿ ಖಾಸಗಿ ಟ್ಯಾಂಕರ್ ಗಳನ್ನೇ ನೀರಿನ ಮೂಲವಾಗಿ ಬಳಸಿಕೊಳ್ಳುತ್ತಿವೆ. ಖಾಸಗಿ ಟ್ಯಾಂಕರ್ ಅನ್ನು ಸ್ಥಗಿತಗೊಳಿಸಿದರೆ ಆ ವಲಯದ ಜನರಿಗೆ ಹೊಡೆತ ಬೀಳುತ್ತದೆ. ಹೀಗಾಗಿ ಖಾಸಗಿ ಟ್ಯಾಂಕರ್ ಗಳನ್ನು ಸ್ಥಗಿತಗೊಳಿಸುವ ಬದಲು, ಹೆಚ್ಚುವರಿ ಹಣ ಪೀಕುವ ಟ್ಯಾಂಕರ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದು ಜಾರ್ಜ್ ತಿಳಿಸಿದರು.
ಹೊಸದಾಗಿ ಸೇರ್ಪಡೆಯಾದ ನೀರಿನ ಲಭ್ಯತೆ ಇಲ್ಲದ 10 ಪ್ರದೇಶಗಳಲ್ಲೂ 5 ಹೊಸ ಬೋರ್ ವೆಲ್ ಗಳನ್ನು ಕೊರೆಯಲು ಸೂಚನೆ ನೀಡಲಾಗಿದೆ. ಇದಲ್ಲದೆ ಈಗಾಗಲೇ ಚಾಲ್ತಿಯಲ್ಲಿರುವ ಬೋರ್ ವೆಲ್ ಗಳು ಮತ್ತು ಕೆಟ್ಟು ನಿಂತಿರುವ ಬೋರ್ ವೆಲ್ ಗಳ ಮೋಟಾರ್ ಗಳ ಕಾರ್ಯ ಪರೀಕ್ಷಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು 2021ರ ವೇಳೆಗೆ ಬೆಂಗಳೂರಿನಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಇನ್ನು ಸಭೆ ಬಳಿಕ ಮಾಹಿತಿ ನೀಡಿದ ಬೆಂಗಳೂರು ಬಿಡಬಲ್ಯೂ ಎಸ್ ಎಸ್ ಬಿ ಚೇರ್ಮನ್ ತುಶಾರ್ ಗಿರಿನಾಥ್ ಅವರು, ಮೇ ಅಂತ್ಯದವರೆಗೂ ಬೆಂಗಳೂರಿಗೆ ಸುಮಾರು 9.75 ಟಿಎಂಸಿ ನೀರು ಬೇಕಾಗುತ್ತದೆ. ಪ್ರಸ್ತುತ ಕೃಷ್ಣ ರಾಜ ಸಾಗರ ಸೇರಿದಂತೆ ಬೆಂಗಳೂರಿಗೆ ನೀರು ಸಂಪರ್ಕ ಒದಗಿಸುವ ಪ್ರಮುಖ ಜಲಾಶಯಗಳಲ್ಲಿ ಒಟ್ಟು 11.75 ಟಿಎಂಸಿ ನೀರಿದೆ. ಇನ್ನು ನೀರು ಹರಿಸುವಾಗ ಸುಮಾರು 2-3 ಟಿಎಂಸಿ ನೀರು ಪೋಲಾಗಬಹುದು. ಆದರೂ ಆತಂಕ ಪಡುವ ಅಗತ್ಯವಿಲ್ಲ. ಇದಲ್ಲದೇ ತುರ್ತು ಸಂದರ್ಭಗಳಲ್ಲಿ ನೀರು ಪೂರೈಕೆ ಮಾಡಲು 100 ಟ್ಯಾಂಕರ್ ಗಳು ಇವೆ. ಇವು ಬೆಂಗಳೂರಿನ ಯಾವುದೇ ಮೂಲಗೂ ನೀರು ಸರಬರಾಜು ಮಾಡಬಲ್ಲವು.
ಇದೇ ವೇಳೆ ಬಿಡಬಲ್ಯೂ ಎಸ್ ಎಸ್ ಬಿ ಮುಖ್ಯ ಎಂಜಿನಿಯರ್ (ಕೊಳಚೆ ನೀರು ನಿರ್ವಹಣಾ ಮಂಡಳಿ) ರಾಮಕೃಷ್ಣ ಅವರು ಮಾತನಾಡಿ ಬೆಂಗಳೂರಿನಿಂದ ಪ್ರತಿನಿತ್ಯ ಸುಮಾರು 1, 440 ಮಿಲಿಯನ್ ಲೀಟರ್ ನೀರು ಕೊಳಚೆ ರೂಪದಲ್ಲಿ ಮೋರಿ ಸೇರುತ್ತಿದೆ. ಪ್ರಸ್ತುತ ನಮ್ಮಲ್ಲಿ 14 ಕೊಳಚೆ ನೀರು ಶುದ್ದೀಕರಣ ಘಟಕಗಳಿದ್ದು, ಇವು ಪ್ರತಿ ನಿತ್ಯ 721 ಮಿಲಿಯನ್ ಲೀಟರ್ ನೀರು ಶುದ್ಧೀಕರಿಸುವ ಸಾಮರ್ಥ್ಯಹೊಂದಿದೆ ಎಂದು ಅವರು ಮಾಹಿತಿ ನೀಡಿದರು.
Advertisement