ಬೆಂಗಳೂರು: ರಸ್ತೆ ಬದಿಯಲ್ಲಿ ಹಾಕಲಾಗಿರುವ ಹೋರ್ಡಿಂಗ್ಸ್ (ಬೃಹತ್ ಜಾಹಿರಾತು ಫಲಕಗಳು) ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಬರೊಬ್ಬರಿ 30 ಮರಗಳಿಗೆ ಕೊಡಲಿ ಪೆಟ್ಟು ನೀಡಿ ಮತ್ತಷ್ಟು ಮರಗಳಿಗೆ ವಿಷ ಪ್ರಾಶನ ಮಾಡಿ ಅವು ಒಣಗುವಂತೆ ಮಾಡುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಮಾರತ್ ಹಳ್ಳಿ ಬಳಿ ಇರುವ ಕಳಾ ಮಂದಿರ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮರಗಳಿಗೆ ವಿಷ ಪ್ರಾಶನ ಮಾಡಿದವರು ಯಾರು ಎಂದು ಈ ವರೆಗೂ ತಿಳಿದುಬಂದಿಲ್ಲ. ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹದೇವಪುರ ಉಪ ಅರಣ್ಯಾಧಿಕಾರಿ ತಿಮ್ಮಪ್ಪ ಅವರು, 30 ಮರಗಳು ಹಾನಿಗೀಡಾಗಿದ್ದು, ಈ ಪೈಕಿ 13 ಮರಗಳನ್ನು ಕಡಿಯಲಾಗಿದ್ದು ಉಳಿದ 17 ಮರಗಳಿಗೆ ವಿಷ ಪ್ರಾಶನ ಮಾಡಲಾಗಿದೆ. ಈ ಮರಗಳು ವಿಷ ಪ್ರಾಶನದಿಂದಾಗಿ ಕಾಲಕ್ರಮೇಣ ಒಡಗಿ ಹೋಗುತ್ತವೆ. ಬಳಿಕ ಮತ್ತೆ ಅವರು ಚಿಗುರುವುದಿಲ್ಲ. ಆ ಮೂಲಕ ಮರಗಳ ಹಿಂದೆ ಹಾಕಿರುವ ಹೋರ್ಡಿಂಗ್ಸ್ ಗಳು ದಾರಿ ಹೋಕರಿಗೆ ಕಾಣುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಕರ್ನಾಟಕ ಮರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ದೂರು ದಾಖಲಿಸಲಾಗಿದ್ದು, ವಿಷ ಪ್ರಾಶನ ಮಾಡಿದವರಿಗಾಗಿ ಶೋಧ ನಡೆಸಲಾಗುತ್ತಿದೆ. ಇನ್ನು ಈ ವಿಷ ಪ್ರಾಶನಕ್ಕೊಳಗಾದ ಮರಗಳ ಪೈಕಿ ಕೇವಲ 3 ಮರಗಳನ್ನು ಮಾತ್ರ ಉಳಿಸಿಕೊಳ್ಳಲು ಪ್ರಯತ್ನ ಮಾಡಬಹುದು ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು. "ವಿಷ ಪ್ರಾಶನಕ್ಕೀಡಾದ ಮರಗಳ ಬೇರುಗಳಲ್ಲಿದ್ದ ಆ್ಯಸಿಡ್ ಅನ್ನು ಬಹುತೇಕ ತೆಗೆಯಲಾಗಿದೆ. ಉಳಿಸಿಕೊಳ್ಳಬಹುದಾದ ಮರಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬೇಸಿಗೆ ಕಾಲವಾದ್ದರಿಂದ ಅವುಗಳ ಚೇತರಿಕೆ ನಿಧಾನಗತಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನು ಮರಗಳಿಗೆ ವಿಷ ಪ್ರಾಶನ ಮಾಡಿದ ದುಷ್ಕರ್ಮಿಗಳ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement