ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಎಚ್ಚರ..ಪರೀಕ್ಷಾ ಅಕ್ರಮಕ್ಕೆ 5 ವರ್ಷ ಜೈಲು, 5 ಲಕ್ಷ ದಂಡ!

ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಶಿಕ್ಷಣ ಕಾಯ್ದೆ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆದಿದ್ದು, ಪರೀಕ್ಷಾ ಅಕ್ರಮದ ವಿರುದ್ಧದ ಕಾನೂನು ಇನ್ನು ಮತ್ತಷ್ಟು ಕಠಿಣವಾಗಲಿದೆ.
Published on

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಶಿಕ್ಷಣ ಕಾಯ್ದೆ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆದಿದ್ದು, ಪರೀಕ್ಷಾ ಅಕ್ರಮದ ವಿರುದ್ಧದ ಕಾನೂನು ಇನ್ನು ಮತ್ತಷ್ಟು ಕಠಿಣವಾಗಲಿದೆ.

ಉಪನ್ಯಾಸಕರು ಮತ್ತು ಶಿಕ್ಷಕರ ವಿರೋಧಕ್ಕೆ ಕಾರಣವಾಗಿದ್ದ ಮತ್ತು ತೀವ್ರ ವಿವಾದಕ್ಕೆ ಒಳಗಾಗಿದ್ದ ಈ ಮಸೂದೆಗೆ ಕೊನೆಗೂ ರಾಜ್ಯ ಸರ್ಕಾರ ವಿಧಾನ ಪರಿಷತ್ ನ ಅನುಮೋದನೆ ಪಡೆದಿದ್ದು, ನೂತನ ತಿದ್ದುಪಡಿ ಕಾಯ್ದೆಯ ಅನ್ವಯ ಪರೀಕ್ಷಾ ಅಕ್ರಮಕ್ಕೆ ಗರಿಷ್ಠ ಶಿಕ್ಷೆ ನೀಡಲು ಸರ್ಕಾರ ನಿರ್ಧರಿಸಿದೆ. ತೀವ್ರ ಗದ್ದಲದ ನಡುವೆಯೇ ಈ ಮಹತ್ವದ ಮಸೂದೆಗೆ ಅನುಮೋದನೆ ಪಡೆಯಲಾಗಿದ್ದು, ಮತ್ತೂಮ್ಮೆ ವಿಧಾನ ಸಭೆಯಲ್ಲಿ ಒಪ್ಪಿಗೆ ಪಡೆದ ಅನಂತರ ರಾಜ್ಯಪಾಲರ ಅನುಮೋದನೆ ಪಡೆಯಬೇಕಿದೆ.

ಕಾಯ್ದೆಯಲ್ಲಿನ ಅಂಶಗಳ ಪ್ರಕಾರ ಪರೀಕ್ಷಾ ಅಕ್ರಮ ನಡೆಸುವ ಉಪನ್ಯಾಸಕರು/ ಶಿಕ್ಷಕರು, ಉದ್ಯೋಗಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆ  ಮೊದಲ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆ, 5 ಲಕ್ಷ ರು. ದಂಡ, ಎರಡನೇ ಅಪರಾಧ/ ಮುಂದುವರಿಕೆಗೆ ಕನಿಷ್ಠ ಐದು ವರ್ಷ ಜೈಲು ವಾಸ, 5 ಲಕ್ಷ ರೂ. ದಂಡ ಮತ್ತು ಸ್ಕೀಮ್‌ ಆಫ್ ಇವ್ಯಾಲ್ಯುಯೇಷನ್‌ ಉಲ್ಲಂಘನೆ ಅಡಿಯಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡ ಹೇರಲು ನಿರ್ಧರಿಸಲಾಗಿದೆ.

ಅಂತೆಯೇ ಪರೀಕ್ಷಾ ಅಕ್ರಮದಲ್ಲಿ ಸಿಕ್ಕಿ ಬೀಳುವ ವಿದ್ಯಾರ್ಥಿಯನ್ನು ಗರಿಷ್ಠ 3 ವರ್ಷ ಡಿಬಾರ್ ಮಾಡಲು ನಿರ್ಧರಿಸಲಾಗಿದೆ. ಪರೀಕ್ಷಾ ಅಕ್ರಮದಲ್ಲಿ ತೊಡಗುವ ವಿದ್ಯಾರ್ಥಿ ಅಹವಾಲು ಹೇಳಿಕೊಳ್ಳಲು ಅವಕಾಶ ಕಲ್ಪಿಸಿದ ಬಳಿಕ ಫ‌ಲಿತಾಂಶ ತಡೆಹಿಡಿಯುವುದು, ಅಮಾನತ್ತಿನಲ್ಲಿಡುವುದು ಅಥವಾ ರದ್ದುಗೊಳಿಸುವುದು ಅಥವಾ ಮೂರು ವರ್ಷಗಳವರೆಗೆ ಆತ ಪರೀಕ್ಷೆ ತೆಗೆದುಕೊಳ್ಳದಂತೆ ಡಿಬಾರ್‌ ಮಾಡುವ ಅವಕಾಶವನ್ನು ತಿದ್ದುಪಡಿ ಕಾಯ್ದೆಯಲ್ಲಿ ನೀಡಲಾಗಿದೆ. ಅಂತೆಯೇ ಪರೀಕ್ಷಾ ಅಕ್ರಮಕ್ಕೆ ನೆರವಾಗುವ ಶಿಕ್ಷಣ ಸಂಸ್ಥೆ, ಪರೀಕ್ಷಾ ಕೇಂದ್ರ- ಶಿಕ್ಷಣ ಸಂಸ್ಥೆ ಅಥವಾ ಪರೀಕ್ಷಾ ಕೇಂದ್ರಕ್ಕೆ ತನ್ನ ಅಹವಾಲು ಸಲ್ಲಿಸಲು ಅವಕಾಶ ನೀಡಿ ಬಳಿಕ ಶೈಕ್ಷಣಿಕ ಸಂಸ್ಥೆ ಅಥವಾ ಪರೀಕ್ಷಾ ಕೇಂದ್ರದ ಮಾನ್ಯತೆಯನ್ನು ಮೂರು ವರ್ಷಗಳವರೆಗೆ ಅಮಾನತಿನಲ್ಲಿಡಲು ಅಥವಾ ಹಿಂಪಡೆಯಲು ಶಿಫಾರಸು ಮಾಡಲಾಗಿದೆ.

ಜೆಡಿಎಸ್‌ ಅಸಮಾಧಾನ
ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ ವಿಧಿಸಲಾಗುವ ಶಿಕ್ಷೆ, ದಂಡ ಪ್ರಮಾಣ, ಪರೀಕ್ಷಾ ಅಕ್ರಮ ನಡೆಸಿದ ವಿದ್ಯಾರ್ಥಿಗಳನ್ನು 3 ವರ್ಷ ಡಿಬಾರ್‌ ಮಾಡುವ ತಿದ್ದುಪಡಿ ಮಸೂದೆಯ ಅಂಶಗಳಿಗೆ ಬಿಜೆಪಿ - ಜೆಡಿಎಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವ ತನ್ವೀರ್‌ ಸೇಠ್, "ವಿದ್ಯಾರ್ಥಿಗಳು ಅಕ್ರಮದಲ್ಲಿ ತೊಡಗದಂತೆ ಮಾಡಲು ಮೂರು ವರ್ಷದವರೆಗೆ ಡಿಬಾರ್‌ ಮಾಡುವ ಅಂಶ ಸೇರಿಸಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಶೇ. 100 ಫ‌ಲಿತಾಂಶ ಪಡೆಯಲು ಪರೀಕ್ಷಾ ಅಕ್ರಮಕ್ಕೆ ಸಹಕಾರ ನೀಡುತ್ತಿವೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲೇಬೇಕಾಗುತ್ತದೆ" ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com