ಬೆಂಗಳೂರು: ಬಂಧಿತ ಪಾಕ್ ಪ್ರಜೆಗಳು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ- ಅಧಿಕಾರಿಗಳು

ನಗರದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದಡಿ ಪೊಲೀಸರ ಬಲೆಗೆ ಬಿದ್ದಿರುವ ಪಾಕಿಸ್ತಾನ ಪ್ರಜೆಗಳು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಶನಿವಾರ ತಿಳಿದುಬಂದಿದೆ...
ಬಂಧಿತ ಪಾಕಿಸ್ತಾನ ಪ್ರಜೆಗಳು
ಬಂಧಿತ ಪಾಕಿಸ್ತಾನ ಪ್ರಜೆಗಳು
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ ಆರೋಪದಡಿ ಪೊಲೀಸರ ಬಲೆಗೆ ಬಿದ್ದಿರುವ ಪಾಕಿಸ್ತಾನ ಪ್ರಜೆಗಳು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಶನಿವಾರ ತಿಳಿದುಬಂದಿದೆ. 
ಕರಾಚಿ ನಿವಾಸಿಯಾಗಿರುವ ಸಮೀರಾ (25) ಎಂಬಾಕೆಯನ್ನು ಕೇರಳ ರಾಜ್ಯಕ್ಕೆ ಕರೆ ತರುವಂತೆ ಪಾಷಾ ಎಂಬ ವ್ಯಕ್ತಿ ಮೊಹಮ್ಮದ್ ಶಾಹಿಬ್ (30) ಎಂಬುವವರಿಗೆ ತಿಳಿಸಿದ್ದ. ಅಲ್ಲದೆ ಪಾಷಾ ಕೇರಳದಿಂದಲೇ ಸಮೀರಾ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದ. ಇದೀಗ ಸಮೀರಾ ಸಂಬಂಧಿಕರಾಗಿರುವ ಕಿರೊಣ್ ಗುಲಾಂ ಅಲಿ ಹಾಗೂ ಕ್ವಾಸಿಬ್ ಶಂಸುದ್ದೀನ್ ಎಂಬುವವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ವಿಚಾರಣೆ ವೇಳೆ ಬಂಧಿತರು ತಮ್ಮ ಪ್ರೇಮಕ್ಕೆ ಕುಟುಂಬದವರಿಂದ ವಿರೋಧ ವ್ಯಕ್ತವಾದ ಕಾರಣಕ್ಕೆ ಜೀವ ಭಯದಿಂದ ಭಾರತಕ್ಕೆ ಬಂದಿದ್ದಾಗಿ ಪುನರುಚ್ಚರಿಸಿದ್ದರೂ ಕೇಂದ್ರ ತನಿಖಾ ಸಂಸ್ಥೆಗಳು, ನಗರದಲ್ಲಿ ಅವರು ಸ್ನೇಹ ಹೊಂದಿದ್ದವರ ಬಗ್ಗೆ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರ ಸಹಕಾರದಲ್ಲಿ ಮಾಹಿತಿ ಪಡೆಯುತ್ತಿದ್ದಾರೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. 
ಕಳೆದ ಎಂಡು ತಿಂಗಳಿಂದ ಕುಮಾರಸ್ವಾಮಿ ಲೇಔಟ್ ಸಮೀಪ ಕಾನೂನು ಬಾಹಿರವಾಗಿ ನೆಲೆಸಿದ್ದ ಪಾಕಿಸ್ತಾನದ ಸಮೀರಾ ಅಲಿಯಾಸ್ ನಜ್ಮಾ, ಆಕೆಯ ಸಂಬಂಧಿಕರಾದ ಮಹಮದ್ ಖಾಸೀಫ್, ಕಿರಣ್ ಅಲಿಯಾಸ್ ಝೈನಬ್ ಹಾಗೂ ಈ ಮೂವರಿಗೆ ಸಹಕರಿಸಿದ ಕಾರಣಕ್ಕೆ ಕೇರಳ ಮೂಲದ ಮಹಮದ್ ಸಿಹಾಬ್ ನನ್ನು ಬಂಧಿಸಲಾಗಿತ್ತು. ಈ ವಿಚಾರಣೆ ವೇಳೆ ಪಾಕ್ ಪ್ರೇಮ ಕಹಾನಿ ಬೆಳಕಿಗೆ ಬಂದಿತ್ತು. ತನಿಖೆಯಲ್ಲಿ ಕೇಂದ್ರ ಗುಪ್ತಚರ, ರಾ, ರಾಷ್ಟ್ರೀಯ ತನಿಖಾ ದಳ ಮಾತ್ರವಲ್ಲದೆ ರಾಜ್ಯದ ಐಎಸ್ ಡಿ ಹಾಗೂ ಸಿಸಿಬಿ ತಂಡಗಳು ಕಾರ್ಯ ನಿರತರಾಗಿವೆ. 
ಬಂಧಿತ ಪಾಕಿಸ್ತಾನ ಪ್ರಜೆಗಳು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಆದರೆ, ಬೆಂಗಳೂರಿಗೆ ಬರುವುದಕ್ಕೂ ಮುನ್ನ ಅಪರಾಧ ಕೃತ್ಯಗಳಲ್ಲಿ ಏನಾದರೂ ಭಾಗಿಯಾಗಿದ್ದರೇ ಎಂಬುದರ ಬಗ್ಗೆ ಇದೀಗ ಗುಪ್ತಚರ ಇಲಾಖೆ ಅಧಿಕಾರಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಬಂಧಿತರು ಕಠ್ಮಂಡುವಿನಿಂದ ಕತಾರ್ ಮೂಲಕ ಭಾರತಕ್ಕೆ ಬಂದಿದ್ದಾರೆ. ಆದರೆ, ಎಲ್ಲಿಯೂ ದೀರ್ಘಾವಧಿಗಳ ನೆಲೆಯೂರಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ತನಿಖೆಯೊಂದಿಗೆ ಈಗಾಗಲೇ ಗುಪ್ತಚರ ಇಲಾಖೆಯ ತಂಡ ಕೈಜೋಡಿಸಿದ್ದು, ಭಾರತ ತಲುಪಲು ಮತ್ತಷ್ಟು ಜನರು ಇವರಿಗೆ ಸಹಾಯ ಮಾಡಿರುವ ಶಂಕೆಗಳು ವ್ಯಕ್ತವಾಗಿದ್ದು, ಅಗತ್ಯಬಿದ್ದರೆ ಕತಾರ್ ಗೆ ಅಧಿಕಾರಿಗಳನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com