ಜೂನ್‌ 12ರಂದು ಕರ್ನಾಟಕ ಬಂದ್‌: ವಾಟಾಳ್‌ ನಾಗಾರಾಜ್

ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಸೇರಿ ವಿವಿಧ ಬೇಡಿಕೆಗಳು ಈಡೇರದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಕನ್ನಡ ಒಕ್ಕೂಟ ಜೂನ್ 12ರಂದು "ಕರ್ನಾಟಕ ಬಂದ್‌"ಗೆ ಕರೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಸೇರಿ ವಿವಿಧ ಬೇಡಿಕೆಗಳು ಈಡೇರದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಕನ್ನಡ ಒಕ್ಕೂಟ ಜೂನ್ 12ರಂದು "ಕರ್ನಾಟಕ ಬಂದ್‌"ಗೆ ಕರೆ ನೀಡಿದೆ.

ದೈನಿಕವೊಂದು ವರದಿ ಮಾಡಿರುವಂತೆ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ, ರೈತರ ಸಾಲ ಮನ್ನಾ ಹಾಗೂ ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಜಾರಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು  ಮಧ್ಯ ಪ್ರವೇಶಿಸಲು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಪರವಾಗಿ ಕನ್ನಡ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಅವರು ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ ಎಂದು ವರದಿ ಮಾಡಿದೆ.

ರೈತರು ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಶಾಶ್ವತ ಪರಿಹಾರ ಕೊಂಡುಕೊಳ್ಳುವಲ್ಲಿ ವಿಫಲವಾಗಿದೆ. ಗೋವಾ, ಮಹಾರಾಷ್ಟ್ರ, ಕರ್ನಾಟಕ ಮುಖ್ಯಮಂತ್ರಿಗಳು ಸಭೆ  ನಡೆಸಿ ಈ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಜೂನ್   12ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್‌ ಜರುಗಲಿದೆ. ಕರ್ನಾಟಕ ಬಂದ್‌ ಗೆ ವಿವಿಧ ಸುಮಾರು 2000 ಸಂಘಟನೆಗಳು ಕೈಜೋಡಿಸಲಿವೆ. ಅಂದು ಉದ್ದಿಮೆಗಳು, ಚಿತ್ರರಂಗ ಸೇರಿದಂತೆ ಪ್ರತಿಯೊಬ್ಬರೂ ಬಂದ್‌ ಗೆ  ಬೆಂಬಲ ನೀಡಿ ಯಶಸ್ವಿಗೊಳಿಸಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.

ಸಾವಿರ ಕೋಟಿಗೂ ಅಧಿಕ ಬೆಲೆಬಾಳುವ ಆಸ್ತಿಯನ್ನು ಹೊಂದಿರುವ ರಾಜ್ಯದ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಗಿತಗೊಳಿಸುವ ಮೂಲಕ ಖಾಸಗಿಯವರಿಗೆ ಆಸ್ತಿ ಮಾರಾಟ ಮಾಡಲು ಸರ್ಕಾರಗಳು ಕುತಂತ್ರ ನಡೆಸುತ್ತಿವೆ. ಇಂತಹ  ಕುತಂತ್ರವನ್ನು ಖಂಡಿಸಿ ಜೂನ್ 12ರ ಬೆಳಗ್ಗೆ 10 ಗಂಟೆಗೆ ಪುರಭವನ (ಟೌನ್ ಹಾಲ್)ದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಬೃಹತ್‌ ರಾರ‍ಯಲಿ ನಡೆಸಲಾಗುವುದು ಎಂದು ಅವರು ಹೇಳಿದರು.

ಇದೇ ವೇಳೆ ಮೇಕೆದಾಟು ಯೋಜನೆ ಕಾಮಗಾರಿ ಶೀಘ್ರ ಆರಂಭಿಸಲು ಆಗ್ರಹಿಸಿ ಜೂನ್ 6ರಂದು ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಿಂದ ರಾಮನಗರ ಮಾರ್ಗವಾಗಿ ಕನಕಪುರದವರೆಗೆ ಪ್ರತಿಭಟನಾ ಮೆರವಣಿಗೆ  ನಡೆಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ಅವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com