ಬೆಂಗಳೂರು: ಇದೇ ಸೋಮವಾರ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದು, ಪರೀಕ್ಷೆ ಬರೆದ ಸುಮಾರು 6 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ನಾಳೆ ಮಧ್ಯಾಹ್ನದ ಬಳಿಕ ವೆಬ್ ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಿದ್ದು, ಮಂಗಳವಾರ ಆಯಾ ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ.
ಇನ್ನು ಹಾಲಿ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿ ಶಿಕ್ಷಣ ಸಚಿವರ ಬದಲಿಗೆ ಅಧಿಕಾರಿಗಳು ಫಲಿತಾಂಶ ಪ್ರಕಟ ಮಾಡಲಿದ್ದಾರೆ. ನಾಳೆ ಸುದ್ದಿಗೋಷ್ಠಿ ಕರೆದು ಫಲಿತಾಂಶ ಪ್ರಕಟಗೊಳಿಸಲಿದ್ದಾರೆ ಎಂದು ಪಿಯು ಮಂಡಳಿ ನಿರ್ದೇಶಕಿ ಶಿಖಾ ಮಾಹಿತಿ ನೀಡಿದ್ದಾರೆ.
ಒಟ್ಟು ಆರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 3,37,860 ಬಾಲಕಿಯರು ಮತ್ತು 3,52,292 ಬಾಲಕರು ಸೇರಿದ್ದಾರೆ.
ಎಸ್ಎಂಎಸ್ ಮೂಲಕ ಫಲಿತಾಂಶ
ವಿದ್ಯಾರ್ಥಿಗಳು ಎಸ್ಎಂಎಸ್ ಮಾಡುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ. ತಮ್ಮ ಮೊಬೈಲ್ನಿಂದ KAR12 ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನಿಮ್ಮ ರೋಲ್ ನಂಬರ್ ನಮೂದಿಸಿ 56263ಗೆ ಸಂದೇಶ ಕಳುಹಿಸುವ ಮೂಲಕ ಫಲಿತಾಂಶ ಪಡೆಯಬಹುದು.