ಏರ್ ಶೋ ಬೆಂಗಳೂರು ಕೈತಪ್ಪಿ ಹೋದರೆ ಹೊಟೇಲ್ ಉದ್ಯಮಕ್ಕೆ 500 ಕೋಟಿ ರೂ.ಗಳಷ್ಟು ನಷ್ಟ
ಬೆಂಗಳೂರು: ಭಾರತೀಯ ವೈಮಾನಿಕ ಪ್ರದರ್ಶನ ಈ ಬಾರಿ ಬೆಂಗಳೂರು ನಗರದ ಕೈತಪ್ಪಿ ಹೋಗುತ್ತಿರುವ ವಿಷಯ ಸದ್ಯ ಬಿಸಿಬಿಸಿ ಚರ್ಚೆಯಾಗುತ್ತಿದ್ದು ಕೇಂದ್ರ ಸರ್ಕಾರ ಎಲ್ಲಿ ನಡೆಸುವುದು ಎಂದು ಘೋಷಣೆ ಮಾಡಲು ವಿಳಂಬ ತೋರುತ್ತಿದೆ. ಏರೋ ಇಂಡಿಯಾ ಶೋ ಬೆಂಗಳೂರು ಕೈತಪ್ಪಿ ಹೋದರೆ ಹೊಟೇಲ್ ಉದ್ಯಮದ ಮೇಲೆ ತೀವ್ರ ಹೊಡೆತ ಬೀಳಲಿದ್ದು ಸುಮಾರು 500 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಕೈಗಾರಿಕಾ ತಜ್ಞರು ಹೇಳುತ್ತಾರೆ.
ವಿದೇಶಿ ಕಂಪೆನಿಗಳು ಮತ್ತು ಉನ್ನತ ಕಂಪೆನಿಗಳ ಅಧಿಕಾರಿಗಳು, ಅಂತರಿಕ್ಷ ಕೈಗಾರಿಕೆಗಳ ಉದ್ಯಮಿಗಳು ಏರ್ ಶೋದಲ್ಲಿ ಭಾಗವಹಿಸುವುದರಿಂದ ಉದ್ಯಮಿಗಳು ಹೊಟೇಲ್ ನಲ್ಲಿ ಉಳಿದುಕೊಂಡು ವ್ಯಾಪಾರ ಹೆಚ್ಚಾಗುತ್ತದೆ. ವೈಮಾನಿಕ ಪ್ರದರ್ಶನಕ್ಕೆ ಬರುವ ಉದ್ಯಮಿಗಳು ಕೆಲವು ತಿಂಗಳುಗಳ ಹಿಂದೆಯೇ ಹೊಟೇಲ್ ಗಳನ್ನು ಬುಕ್ಕಿಂಗ್ ಮಾಡುತ್ತಾರೆ. ಆದರೆ ಈ ಬಾರಿ ಎಲ್ಲಿ ನಡೆಯುತ್ತದೆ ಎಂಬ ಗೊಂದಲವಿರುವುದರಿಂದ ಕಂಪೆನಿಗಳ ಅಧಿಕಾರಿಗಳು, ಉದ್ಯಮಿಗಳು ಇನ್ನೂ ಬುಕ್ಕಿಂಗ್ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ನಗರದ ಹೊಟೇಲ್ ನ ಪ್ರಧಾನ ವ್ಯವಸ್ಥಾಪಕರು ಇದ್ದಾರೆ.
ಸಾರಿಗೆ ಉದ್ಯಮದಲ್ಲಿ ಕೂಡ ಇಂತಹದ್ದೇ ಪರಿಸ್ಥಿತಿಯಿದೆ. ವೈಮಾನಿಕ ಪ್ರದರ್ಶನಕ್ಕೆ ಮುನ್ನ ದುಬಾರಿ ಕಾರುಗಳನ್ನು ಕಾಯ್ದಿರಿಸಲು ಮನವಿಗಳು ಬರುತ್ತಿರುತ್ತದೆ. ಕೊನೆ ಕ್ಷಣದಲ್ಲಿ ರದ್ದುಪಡಿಸಿದರೆ ಉನ್ನತ ಅಧಿಕಾರಿಗಳು ಬರುವಾಗ ಮುಜುಗರವಾಗುತ್ತದೆ ಎನ್ನುತ್ತಾರೆ ಬೆಂಗಳೂರು ಪ್ರವಾಸಿಗರ ಟ್ಯಾಕ್ಸಿ ನಿರ್ವಾಹಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ.
ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ನಡೆಸಬೇಕೆಂದು ಅವರ ಸಂಘಟನೆ ಇತ್ತೀಚೆಗೆ ರಕ್ಷಣಾ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿತ್ತು.
ಈ ಬಗ್ಗೆ ನಿನ್ನೆ ಪ್ರತಿಕ್ರಿಯೆ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಬೆಂಗಳೂರು ವೈಮಾನಿಕ ಪ್ರದರ್ಶನವನ್ನು ಉತ್ತರ ಪ್ರದೇಶದ ಲಕ್ನೊಗೆ ಸ್ಥಳಾಂತರಿಸುವುದಿಲ್ಲ. ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ವರ್ಗಾಯಿಸಬಾರದೆಂದು ಬಿಜೆಪಿ ಶಾಸಕರು ಮತ್ತು ಸಂಸದರು ಮನವಿ ಮಾಡಿಕೊಂಡಿದ್ದೇವೆ, ನಿರ್ಮಲಾ ಸೀತಾರಾಮನ್ ಅವರು ನಮಗೆ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

