ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್ ಅವರು ಮಾತನಾಡಿ, ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ಪಾಯಸ, ಉಪ್ಪಿನಕಾಯಿ, ಬೆಳಿಗ್ಗೆ ತಿಂಡಿಗೆ ಪಾಲಾಕ್ ಇಡ್ಲಿಯನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಮೆನುವಿನಲ್ಲಿ ರಾಗಿ ಮುದ್ದೆ ಸೇರ್ಪಡೆಗೊಳಿಸುವಂತೆ ಸಲಹೆ ನೀಡಿದ್ದರು. ಈ ಹಿನ್ನಲೆಯಲ್ಲಿ ನಾವು ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಅಧಿಕಾರಿಗಳನ್ನು ಕಳೆದ ತಿಂಗಳು ಸಂಪರ್ಕಿಸಿದ್ದೆವು. ಈ ವೇಳೆ ಗಂಟೆಗೆ 250 ಮುದ್ದೆಗಳನ್ನು ತಯಾರಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿರುವುದಾಗಿ ಅವರು ಮಾಹಿತಿ ಮಾಡಿದ್ದರು. ಕೈಯಲ್ಲಿ ಮುದ್ದೆಗಳನ್ನು ತಯಾರಿಸದ ಹಿನ್ನಲೆಯಲ್ಲಿ ರಾಗಿ ಮುದ್ದೆ ಆರೋಗ್ಯಕರವಾಗಿರುತ್ತದೆ. ಪ್ರತೀ ಮುದ್ದೆ 250 ಗ್ರಾಂನಷ್ಟಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ರಾಗಿ ಮುದ್ದೆ ತಯಾರಿಸುವ ಯಂತ್ರ ಬ್ಯಾಟರಾಯನಪುರದಲ್ಲಿ ಬಳಕೆ ಮಾಡಲಾಗುತ್ತಿದೆ. 3-4 ವಾರ್ಡ್ ಗಳಲ್ಲಿರುವ ಕ್ಯಾಂಟೀನ್ ಗಳಿಗೆ ಇಲ್ಲಿ ತಯಾರಾಗುವ ಮುದ್ದೆಗಳನ್ನು ರವಾನಿಸಲಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆಗಳನ್ನು ವ್ಯಕ್ತವಾಗುತ್ತಿವೆ. ಮುಂದಿನ 10 ದಿನಗಳವರೆಗೂ ಇದನ್ನು ಮುಂದುವರೆಸುತ್ತೇವೆ. ಇತರೆ ಇಂದಿರಾ ಕ್ಯಾಂಟೀನ್ ಗಳ ಮೆನುವಿನಲ್ಲೂ ಇದನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.