ಇಂದಿರಾ ಕ್ಯಾಂಟೀನ್ ಮೆನುಗೆ ರಾಗಿ ಮುದ್ದೆ, ಬಸ್ಸಾರು ಸೇರ್ಪಡೆ ಶೀಘ್ರದಲ್ಲೆ

ರಾಜ್ಯದ ಜನರಿಂದ ಅತೀ ಹೆಚ್ಚು ಬೇಡಿಕೆ ಬಂದಿರುವ ಹಿನ್ನಲೆಯಲ್ಲಿ ಮಾರ್ಚ್ ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್ ನ ಊಟದ ಮೆನುವಿನಲ್ಲಿ ರಾಗಿ-ಮುದ್ದೆ, ಸೊಪ್ಪಿನ ಸಾಂಬರ್ ಸೇರ್ಪಡೆ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ರಾಜ್ಯದ  ಜನರಿಂದ ಅತೀ ಹೆಚ್ಚು ಬೇಡಿಕೆ ಬಂದಿರುವ ಹಿನ್ನಲೆಯಲ್ಲಿ ಮಾರ್ಚ್ ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್ ನ ಊಟದ ಮೆನುವಿನಲ್ಲಿ ರಾಗಿ-ಮುದ್ದೆ, ಸೊಪ್ಪಿನ ಸಾಂಬರ್ ಸೇರ್ಪಡೆ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಾತನಾಡಿರುವ ಅವರು, ಇಂದಿರಾ ಕ್ಯಾಂಟೀನ್ ನಲ್ಲಿ ಪ್ರಸ್ತುತ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಅನ್ನ ಮತ್ತು ತರಕಾರಿ ಸಾಂಬಾರ್ ನೀಡಲಾಗುತ್ತಿದೆ. ಜನರಿಂದ ಮುದ್ದೆ ಮತ್ತು ಸೊಪ್ಪಿನ ಸಾಂಬಾರ್ ನೀಡಬೇಕೆಂದು ಬೇಡಿಕೆ ಬಂದಿದೆ. ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 
ಈಗಾಗಲೇ ಮೈಸೂರಿನಿಂದ ಮುದ್ದೆ ಮಾಡುವ ಯಂತ್ರ ಖರೀದಿಸಿ ಪ್ರಾಯೋಗಿಕವಾಗಿ 5 ಕ್ಯಾಂಟೀನ್ ಗಳಲ್ಲಿ ಮುದ್ದೆ ಊಟ ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ ಎಲ್ಲಾ ಕ್ಯಾಂಟೀನ್ ಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ. 
ಅದೇ ರೀತಿ ಕಾಲ ಕಾಲಕ್ಕೆ ಕ್ಯಾಂಟೀನ್ ಮೆನು ಬದಲಿಸಲು ನಿರ್ಧರಿಸಲಾಗಿದೆ. ಅದರಂತೆ ಕೆಲ ವಾರ್ಡ್ ಗಳಲ್ಲಿನ ಕ್ಯಾಂಟೀನ್ ಗಳಲ್ಲಿ ಮೆನು ಬದಲಿಸುವಂತೆ ಮನವಿಗಳು ಬಂದಿದೆ. ಅದನ್ನು ಪರಿಗಣಿಸಿ ಮುಂದಿನ ವಾರದಿಂದ ಈಗಿರುವ ಆಹಾರದ ಜೊತೆಗೆ ಕೆಲ ಸಿಹಿ ತಿಂಡಿ ಸೇರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. 
ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್ ಅವರು ಮಾತನಾಡಿ, ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ಪಾಯಸ, ಉಪ್ಪಿನಕಾಯಿ, ಬೆಳಿಗ್ಗೆ ತಿಂಡಿಗೆ ಪಾಲಾಕ್ ಇಡ್ಲಿಯನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಮೆನುವಿನಲ್ಲಿ ರಾಗಿ ಮುದ್ದೆ ಸೇರ್ಪಡೆಗೊಳಿಸುವಂತೆ ಸಲಹೆ ನೀಡಿದ್ದರು. ಈ ಹಿನ್ನಲೆಯಲ್ಲಿ ನಾವು ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಅಧಿಕಾರಿಗಳನ್ನು ಕಳೆದ ತಿಂಗಳು ಸಂಪರ್ಕಿಸಿದ್ದೆವು. ಈ ವೇಳೆ ಗಂಟೆಗೆ 250 ಮುದ್ದೆಗಳನ್ನು ತಯಾರಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿರುವುದಾಗಿ ಅವರು ಮಾಹಿತಿ ಮಾಡಿದ್ದರು. ಕೈಯಲ್ಲಿ ಮುದ್ದೆಗಳನ್ನು ತಯಾರಿಸದ ಹಿನ್ನಲೆಯಲ್ಲಿ ರಾಗಿ ಮುದ್ದೆ ಆರೋಗ್ಯಕರವಾಗಿರುತ್ತದೆ. ಪ್ರತೀ ಮುದ್ದೆ 250 ಗ್ರಾಂನಷ್ಟಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ. 

ಪ್ರಸ್ತುತ ರಾಗಿ ಮುದ್ದೆ ತಯಾರಿಸುವ ಯಂತ್ರ ಬ್ಯಾಟರಾಯನಪುರದಲ್ಲಿ ಬಳಕೆ ಮಾಡಲಾಗುತ್ತಿದೆ. 3-4 ವಾರ್ಡ್ ಗಳಲ್ಲಿರುವ ಕ್ಯಾಂಟೀನ್ ಗಳಿಗೆ ಇಲ್ಲಿ ತಯಾರಾಗುವ ಮುದ್ದೆಗಳನ್ನು ರವಾನಿಸಲಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆಗಳನ್ನು ವ್ಯಕ್ತವಾಗುತ್ತಿವೆ. ಮುಂದಿನ 10 ದಿನಗಳವರೆಗೂ ಇದನ್ನು ಮುಂದುವರೆಸುತ್ತೇವೆ. ಇತರೆ ಇಂದಿರಾ ಕ್ಯಾಂಟೀನ್ ಗಳ ಮೆನುವಿನಲ್ಲೂ ಇದನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com