ಪೀಣ್ಯ-ಕೆಂಗೇರಿ ನಡುವೆ ಮೆಟ್ರೋ ಸಂಪರ್ಕಕ್ಕೆ ಎಫ್'ಕೆಸಿಸಿಐ ಒತ್ತಾಯ

ಸಿಟಿಕಾನ್ ಸಿಟಿಯಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿರುವ ಮೂಲಭೂತ ಸೌಕರ್ಯ ಹಾಗೂ ಅಧಿಕಾರಿಗಳಿಂದ ಎದುರಾಗುತ್ತಿರುವ ಕಿರುಕುಳಗಳಿಗೆ ಕೈಗಾರಿಕೆ ಹಾಗೂ ವ್ಯಾಪಾರ ಸಂಘಟನೆಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು...
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್'ಕೆಸಿಸಿಐ) ವತಿಯಿಂದ ಸಂವಾದ ಕಾರ್ಯಕ್ರಮ
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್'ಕೆಸಿಸಿಐ) ವತಿಯಿಂದ ಸಂವಾದ ಕಾರ್ಯಕ್ರಮ
ಬೆಂಗಳೂರು: ಸಿಟಿಕಾನ್ ಸಿಟಿಯಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿರುವ ಮೂಲಭೂತ ಸೌಕರ್ಯ ಹಾಗೂ ಅಧಿಕಾರಿಗಳಿಂದ ಎದುರಾಗುತ್ತಿರುವ ಕಿರುಕುಳಗಳಿಗೆ ಕೈಗಾರಿಕೆ ಹಾಗೂ ವ್ಯಾಪಾರ ಸಂಘಟನೆಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಪೀಣ್ಯ ಹಾಗೂ ಕೆಂಗೇರಿ ನಡುವಣ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಮಂಗಳವಾರ ಆಗ್ರಹಿಸಿವೆ. 
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್'ಕೆಸಿಸಿಐ) ವತಿಯಿಂದ ಸಂಸ್ಥೆಯ ಪದಾಧಿಕಾರಿಗಳ ಜೊತೆಗೆ ಮಂಗಳವಾರ ಸಂವಾದವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದರು. 
ಕಾರ್ಯಕ್ರಮದಲ್ಲಿ ಪೀಣ್ಯ ಕೈಗಾರಿಕಾ ಸಂಘಟನೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, ಕಳಪೆ ಕಾಮಗಾರಿ ರಸ್ತೆಗಳು ಹಾಗೂ ಹೆಚ್ಚಳಗೊಂಡಿರುವ ನೀರಿನ ಸುಂಕದಂತಹ ವಿಚಾರಗಳನ್ನು ಪ್ರಸ್ತಾಪ ಮಾಡಿದವು. ಅಲ್ಲದೆ, ಪೀಣ್ಯ ಹಾಗೂ ಕೆಂಗೇರಿ ನಡುವಣ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ಹಾಗೂ ಪೀಣ್ಯವನ್ನು ಕೈಗಾರಿಕಾ ಪಟ್ಟಣವೆಂದು ಘೋಷಣೆ ಮಾಡುವಂತೆ ಕುಮಾರಸ್ವಾಮಿಯವರ ಮನವಿ ಮಾಡಿಕೊಂಡರು. 
ವ್ಯಾಪಾರ ಪರವಾನಗಿ ರದ್ದುಗೊಳಿಸುವಂತೆ ಆಗ್ರಹಿಸಿರುವ ಎಫ್'ಕೆಸಿಸಿಐ ಪದಾಧಿಕಾರಿಗಳು, ಬ್ರ್ಯಾಂಡೆಡ್ ಆಹಾರ ಪದಾರ್ಥಗಳ ಮೇಲಿ ಸರಕು ಮತ್ತು ಸೇವಾ ತೆರಿಗೆಯನ್ನು ಕೈಬಿಡುವಂತೆ, ವಿವಿಧ ಇಲಾಖೆಗಳ ಅಧಿಕಾರಿಗಳು ನಡೆಸುತ್ತಿರುವ ಕಿರುಕುಳನ್ನು ನಿಲ್ಲಿಸುವಂತೆ ಒತ್ತಾಯಿಸಿದರು. 
ಕಾರ್ಯಕ್ರಮದಲ್ಲಿ ಮಾತನಾಡಿರುವ ಕುಮಾರಸ್ವಾಮಿಯವರು, ಸಣ್ಣ ಕೈಗಾರಿಕೆ ಉದ್ಯಮಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕಸ, ಸಂಚಾರದ ಸಮಸ್ಯೆ ಹೆಚ್ಚಾಗಿದೆ. ಅಲ್ಲದೆ, ಜನರ ಸಮಸ್ಯೆಗಳನ್ನು ಸಹ ಆಲಿಸಿದ್ದೇನೆ. ವಿದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆಯಲಾಗಿದ್ದು, ಅವುಗಳನ್ನು ಅನುಷ್ಠಾನಗೊಳಿಸಲಾಗುವುದು. ರೈತರ ಅಭಿವೃದ್ಧಿಗಾಗಿ ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಬೆಳ್ಳಂದೂರು ಕೆರೆಗೆ ಬೆಂಕಿ ಬಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಬೆಳ್ಳಂದೂರು ಕೆರೆ ಸೇರಿದಂತೆ ಎಲ್ಲಾ ಕೆರೆಗಳನ್ನು ಶುದ್ಧೀಕರಣ ಮಾಡಲಾಗುವುದು ಹಾಗೂ ಒಂದು ವರ್ಷದಲ್ಲಿ ಕೆರೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು. 
ಕಾರ್ಯಕ್ರಮದ ವೇಳೆ ಮಂಡ್ಯ ವ್ಯಾಪಾರಿಗಳು ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿಕೊಂಡಿದ್ದು, ಮುಂದಿನ ವಿಧಾನಸಭಾ ಚುನಾವಣೆ ವೇಳೆ ವ್ಯಾಪಾರ ಸಮುದಾಯಕ್ಕೆ ಸೇರಿದ ಕನಿಷ್ಟ ಐದು ಮಂದಿಗಾದರೂ ಟಿಕೆಟ್ ನೀಡುವಂತೆ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com