ಬೆಂಗಳೂರು: ಮೂರು ದಶಕಗಳ ಹಳೆಯ ಉತ್ತರ ಕರ್ನಾಟಕದ ಮಹದಾಯಿ ನದಿ ನೀರು ಹೋರಾಟದಲ್ಲಿ ಪ್ರಾಣವನ್ನು ಕಳೆದುಕೊಂಡ 10 ಮಂದಿ ರೈತರಲ್ಲಿ 7 ರೈತರ ಕುಟುಂಬಗಳಿಗೆ ಇನ್ನೂ ರಾಜ್ಯ ಸರ್ಕಾರದಿಂದ ಸಂಪೂರ್ಣ 5 ಲಕ್ಷ ರೂಪಾಯಿ ಪರಿಹಾರ ಮೊತ್ತ ಸಿಕ್ಕಿಲ್ಲ ಎಂದು ಕರ್ನಾಟಕ ರೈತ ಸೇನೆ ಆರೋಪಿಸಿದೆ.
ಮಹದಾಯಿ ನದಿ ನೀರಿಗೆ ಸಂಬಂಧಪಟ್ಟಂತೆ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಪೈಕಿ ಮೂವರ ಕುಟುಂಬದವರಿಗೆ ಮಾತ್ರ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಿಂದ ಪರಿಹಾರ ಸಿಕ್ಕಿದೆ. ಉಳಿದ ಏಳು ಕುಟುಂಬಗಳ ಸದಸ್ಯರಿಗೆ ಕೇವಲ ಎರಡೂವರೆ ಲಕ್ಷ ರೂಪಾಯಿ ಮಾತ್ರ ಪರಿಹಾರ ಸಿಕ್ಕಿದೆಯಷ್ಟೆ ಎಂದು ರೈತಸೇನೆಯ ರಾಜ್ಯಾಧ್ಯಕ್ಷ ವೀರೇಶ್ ಸೊಬರದ್ ಮಠ್ ಆರೋಪಿಸಿದ್ದಾರೆ.
ಈ ಕುರಿತು ಅವರು ನಿನ್ನೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದರು. ವಿಧಾನಸೌಧದ ಬಳಿ ನಿನ್ನೆ ಧರಣಿ ನಡೆಸುತ್ತಿದ್ದ ರೈತಸೇನೆಯ ಸದಸ್ಯರನ್ನು ಖುದ್ದು ಮುಖ್ಯಮಂತ್ರಿಗಳೇ ಭೇಟಿ ಮಾಡಿದ್ದರು.
ರೈತ ಕುಟುಂಬಗಳಿಗೆ ಶೀಘ್ರವೇ ಬಾಕಿ ಪರಿಹಾರವನ್ನು ಬಿಡುಗಡೆ ಮಾಡುವಂತೆ ರೈತ ಸೇನೆ ಸದಸ್ಯರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು. ರೈತರ ಸಂಪೂರ್ಣ ಸಾಲಮನ್ನಾ, ರೈತರ ಮಕ್ಕಳಿಗೆ ಶೈಕ್ಷಣಿಕ ಸಾಲ, ರಾಜ್ಯಾದ್ಯಂತ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಗ್ರಹಣಾ ಕೇಂದ್ರಗಳ ಸ್ಥಾಪನೆ ಬಗ್ಗೆ ಕೂಡ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ಸೊಬರದ್ ಮಠ್ ಹೇಳಿದ್ದಾರೆ.
Advertisement