ಬಂಧಿತರನ್ನು ರಾಜಾಜಿ ನಗರದ ನಿವಾಸಿ ಹೇಮಂತ್, ವಡ್ಡರಪಾಳ್ಯದ ಮನೋಜ್. ಬಿ, ಮುದಲಪಾಳ್ಯದ ಲೋಕೇಶ್ ಎಂ, ಸುಂಕದಕಟ್ಟೆಯ ಚೇತನ್ ಆರ್ ಎಂದು ಗುರ್ತಿಸಲಾಗಿದೆ.
ವಾಹನಗಳಲ್ಲಿ ದೇವಾಲಯಕ್ಕೆ ಬರುತ್ತಿದ್ದ ಜನರನ್ನು ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸುತ್ತಿದ್ದ ಖದೀಮರು ದರೋಡೆ ಮಾಡುತ್ತಿದ್ದರು. ಕದ್ದ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್'ಗಳನ್ನು ಬಳಸಿ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಖದೀಮರ ಗುಂಪಿನ ವಿರುದ್ಧ ಈವರೆಗೂ 8 ಪ್ರಕರಣಗಳು ದಾಖಲಾಗಿವೆ.
ದರೋಡೆಕೋರರನ್ನು ಹಿಡಿಯುವ ಸಲುವಾಗಿ ಮಾದನಾಯಕನಹಳ್ಲಿ ಪೊಲೀಸರು ವಿಶೇಷ ತಂಡವವನ್ನು ರಚನೆ ಮಾಡಿದ್ದರು. ಇದರಂತೆ ಆರೋಪಿಗಳು ಬಳಕೆ ಮಾಡುತ್ತಿದ್ದ ವಾಹನವನ್ನು ಟ್ರ್ಯಾಕ್ ಮಾಡಿ, ಮೊದಲು ಹೇಮಂತ್ ಎಂಬ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ವಿಚಾರಣೆ ವೇಳೆ ಹೇಮಂತ್ ಗುಂಪಿನಲ್ಲಿದ್ದ ಮೂವರು ಆರೋಪಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ವಿಚಾರಣೆ ಸುಲಭವಾಗಿ ಹಣ ಮಾಡುವ ಸಲುವಾಗಿ ದರೋಡೆ ಹಾದಿ ಹಿಡಿದಿರುವುದಾಗಿ ಖದೀಮರು ಹೇಳಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಆರೋಪಿಗಳಿಂದ 2 ಕಾರು, 5 ದ್ವಿಚಕ್ರ ವಾಹನಗಳು, ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್'ಗಳು ಮತ್ತು ಚಿನ್ನದ ಆಭರಣಗಳು, ರೂ.9 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.