ಮೈಸೂರು: ಯುವಕನೊಬ್ಬನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ 19 ವರ್ಷದ ಯುವತಿ ಮೇಲೆ ಹಲ್ಲೆ ನಡೆಸಿ ಮನೆ ಮೇಲೆ ದಾಳಿ ನಡೆಸಿರುವ ಘಟನೆ ಮೈಸೂರಿನ ಟಿ,ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ತುರಗನೂರು ಗ್ರಾಮದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೂರು ಪೊಲೀಸರು ಯುವಕ, ಆತನ ಪೋಷಕರು, ಸಂಬಂಧಿಕರು ಸೇರಿದಂತೆ 7 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.
ಸಿದ್ದಮಾದಯ್ಯ ಅವರ ಪುತ್ರಿ ಸುಕನ್ಯಾ ಮೇಲೆ ಅದೇ ಗ್ರಾಮದ ಮಲ್ಲಿಕಾರ್ಜುನ ಮತ್ತು ಇತರ ಆರು ಮಂದಿ ಹಲ್ಲೆ ನಡೆಸಿದ್ದು ಯುವತಿ ಗಾಯಗೊಂಡಿದ್ದಾಳೆ. ಹಲ್ಲೆಕೋರರು ಯುವತಿಯ ಮನೆಯೊಳಗೆ ನುಗ್ಗಿ ಸುಮಾರು 85 ಸಾವಿರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಹಾಳುಗೆಡವಿದ್ದಾರೆ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸುಕನ್ಯಾ, ಕಳೆದೊಂದು ವರ್ಷದಿಂದ ಮಲ್ಲಿಕಾರ್ಜುನ ನನಗೆ ಮದುವೆಯಾಗುವಂತೆ ಪೀಡಿಸುತ್ತಿದ್ದನು. ಅದಕ್ಕೆ ಸುಕನ್ಯಾ ಒಪ್ಪದಿದ್ದಾಗ ತನ್ನವರನ್ನು ಕರೆದುಕೊಂಡು ಬಂದು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ. ಸುಕನ್ಯಾ ಪೋಷಕರಿಗೆ ಸಹ ಮಗಳನ್ನು ಮಲ್ಲಿಕಾರ್ಜುನ್ ಗೆ ಮದುವೆ ಮಾಡಿಕೊಡುವುದು ಇಷ್ಟವಿರಲಿಲ್ಲ.
ಈ ಮಧ್ಯೆ ಸುಕನ್ಯಾ ಪೋಷಕರು ಬೇರೆ ಹುಡುಕನನ್ನು ಹುಡುಕುತ್ತಿದ್ದರು. ಇದನ್ನು ತಿಳಿದ ಮಲ್ಲಿಕಾರ್ಜುನ ತನ್ನ ಪೋಷಕರಾದ ಸಿದ್ದಯ್ಯ ಮತ್ತು ಮಹದೇವಮ್ಮ, ಸೋದರಿಯರಾದ ಭಾರತಿ ಮತ್ತು ಸುಮತ್ರಿ ಹಾಗೂ ಭಾವಂದಿರ ಜೊತೆ ಸುಕನ್ಯಾ ಮನೆಗೆ ಬಂದು ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement