ಕೆಲಸ ಕಳೆದುಕೊಂಡ ಟೆಕಿಗಳಿಗೆ ಕಾನೂನು ಮಾರ್ಗದರ್ಶನ ತೋರುವ ಕಿರು ಪುಸ್ತಕ

ಇತ್ತೀಚೆಗೆಯಂತೂ ಐಟಿ ಉದ್ಯಮದಲ್ಲಿ ಸಾಕಷ್ಟು ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದು, ಯಾರು ಯಾವಾಗ ಹೊರ ಹೋಗಬೇಕಾಗುತ್ತದೆ ಎಂಬ ಆತಂಕದಲ್ಲೇ ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಫೋರಂ ಫಾರ್ ಐಟಿ ಎಂಪ್ಲಾಯೀಸ್- (ಎಫ್ ಐಟಿಇ) ತಂಡ
ಫೋರಂ ಫಾರ್ ಐಟಿ ಎಂಪ್ಲಾಯೀಸ್- (ಎಫ್ ಐಟಿಇ) ತಂಡ
Updated on
ಬೆಂಗಳೂರು: ಇತ್ತೀಚೆಗೆಯಂತೂ ಐಟಿ ಉದ್ಯಮದಲ್ಲಿ ಸಾಕಷ್ಟು ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದು, ಯಾರು ಯಾವಾಗ ಹೊರ ಹೋಗಬೇಕಾಗುತ್ತದೆ ಎಂಬ ಆತಂಕದಲ್ಲೇ ಸಮಯ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಸ್ಥೆಗಳು ನಿರ್ವಹಣಾ ದೃಷ್ಟಿಯಿಂದಲೋ ಅಥವಾ ಇನ್ನಾವುದೋ ಆಂತರಿಕ ಕಾರಣದಿಂದಲೇ ಉದ್ಯೋಗಿಗಳನ್ನು ಯಾವುದೇ ರೀತಿಯ ಪೂರ್ವ ನಿರ್ದೇಶನ ವಿಲ್ಲದೇ ಕೆಲಸದಿಂದ ವಜಾ ಮಾಡುತ್ತವೆ ಅಥವಾ ರಾಜಿನಾಮೆ ನೀಡುವಂತೆ ಒತ್ತಾಯ ಹೇರುತ್ತವೆ. ಆಗ ಉದ್ಯೋಗಿಗಳು ಮರು ಮಾತಿಲ್ಲದೇ ಕೆಲಸ ಬಿಡಬೇಕು ಇಲ್ಲವೇ ರಾಜಿನಾಮೆ ನೀಡಬೇಕು. ಇಂತಹ ಸಂದರ್ಭದಲ್ಲಿ ಉದ್ಯೋಗಿಗಳಿಗೆ ತಮ್ಮ ಹಕ್ಕು ಅರಿವಿದ್ದರೆ ಕೆಲಸದಿಂದ ವಜಾ ಮಾಡುವ ಅಥವಾ ಒತ್ತಾಯ ಪೂರ್ವಕ ರಾಜಿನಾಮೆ ಕೇಳುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.
ಹೀಗೆ ದಿಢೀರ್ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗಾಗಿ ಫೋರಂ ಫಾರ್ ಐಟಿ ಎಂಪ್ಲಾಯೀಸ್ (ಎಫ್ ಐಟಿಇ) ವೇದಿಕೆ ನೆರವಿಗೆ ಧಾವಿಸಿದ್ದು, ಕೆಲಸದಿಂದ ವಜಾ ಮಾಡಿದ ಬಳಿಕ ಸಂಸ್ಥೆಯ ಉದ್ಯೋಗಿಗಳು ಕೈಗೊಳ್ಳಬಹುದಾದ ಕಾನೂನು ಮಾರ್ಗದರ್ಶನ ನೀಡುತ್ತಿದೆ. ಈ ಸಂಬಂಧ ಕಿರು ಪುಸ್ತಕವನ್ನೂ ಕೂಡ ಈ ವೇದಿಕೆ ಹೊರ ತಂದಿದ್ದು, ಈ ಕಿರು ಪುಸ್ತಕದಲ್ಲಿ ವಜಾಗೊಂಡ ಐಟಿ ನೌಕರರು ಯಾವ ಕ್ರಮ ಅನುಸರಿಸಬೇಕು ಎಂಬಿತ್ಯಾದಿ ಅಂಶಗಳನ್ನು ವಿವರಿಸಲಾಗಿದೆ. 
ಈ ಬಗ್ಗೆ ಮಾತನಾಡಿರುವ ಎಫ್ಐಟಿಇ ಸದಸ್ಯ ರಾಜೇಶ್ ನಟರಾಜನ್ ಅವರು, ಈ ಕಿರು ಪುಸ್ತಕಗಲ್ಲಿ ಐಟಿ ನೌಕರರಿಗೆ ಸಂಬಂಧಿಸಿದ ಬಹುತೇಕ ಕಾನೂನು ಮಾರ್ಗದರ್ಶನ ಮಾಡಲಾಗಿದೆ. ಕೆಲಸದಿಂದ ವಜಾಗೊಂಡ ಸಿಬ್ಬಂದಿಯ ಮುಂದಿನ ನಡೆ ಹೇಗಿರಬೇಕು. ಆತ ಸಂಸ್ಥೆಯ ಕುರಿತಂತೆ ಯಾವೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಎಂಬಿತ್ಯಾದಿ ಅಂಶಗಳನ್ನು ನಮೂದಿಸಲಾಗಿದೆ. ಕೆಲಸ ಕಳೆದುಕೊಂಡ ಸಾಕಷ್ಟು ಮಂದಿ ನಮಗೆ ಕರೆ ಮಾಡಿ ಒಂದೇ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದಕ್ಕೆ ನಾವು ಸಾಕಷ್ಟು ಬಾರಿ ಉತ್ತರಿಸಿದರೂ ಪದೇ ಪದೇ ಇಂತಹುದೇ ಪ್ರಶ್ನೆಗಳು ಮತ್ತೆ ಮತ್ತೆ ನಮ್ಮ ಬಳಿ ಬರುತ್ತಿತ್ತು.  ನಮ್ಮ ವೇದಿಕೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ನಾವು ಈ ಕಿರು ಪುಸ್ತಕ ಹೊರ ತರಲು ನಿರ್ಧರಿಸಿದೆವು. ನಮಗೆ ಕರೆ ಮಾಡುತ್ತಿದ್ದವರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ನಾವು ಉತ್ತರಿಸಿದ್ದೇವೆ. ಈ ಕಿರು ಪುಸ್ತಕ ಟೆಕ್ಕಿಗಳಿಗೆ ಮಾರ್ಗದರ್ಶನ ಮಾಡಲಿದ್ದು, ತಮ್ಮ ವಿರುದ್ಧ ಸಂಸ್ಥೆಗಳು ತಪ್ಪು ನಿರ್ಣಯ ಕೈಗೊಂಡಿದ್ದರೆ ಅಂತಹ ಸಂಸ್ಥೆಗಳ ವಿರುದ್ಧ ಹೇಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದನ್ನು ವಿವರಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಐಟಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಉದ್ಯೋಗ ಕಡಿತವಾಗಿತ್ತು. ದಿನವೊಂದಕ್ಕೆ ನಮಗೆ 10 ರಿಂದ 15 ಕರೆಗಳು ಬರುತ್ತಿತ್ತು. ಆದರೆ ಈ ವರ್ಷ ಉದ್ಯೋಗ ಕಡಿತ ಮುಂದುವರೆದಿದೆಯಾದರೂ ಪ್ರಮಾಣದಲ್ಲಿ ಕೊಂಚ ಕಡಿತವಾಗಿದೆ. ಪ್ರಮುಖವಾಗಿ ಮಾರ್ಚ್ ಮತ್ತು ಜುಲೈ ತಿಂಗಳ ಅವಧಿಯಲ್ಲಿ ಸಾಕಷ್ಚು ಪ್ರಮಾಣದಲ್ಲಿ ಇಳಿಕೆಯಾಗಿದೆ. ಉದ್ಯಮ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆಗಳ ನೌಕರರೇ ನಮಗೆ ಕರೆ ಮಾಡಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು. ಈ ರಂಗದಲ್ಲಿ ಜೂನಿಯರ್ ಮತ್ತು ಮಧ್ಯಮ ಹಿರಿಯ ನೌಕರರಿಗೆ ಬೇಗ ಕೆಲಸ ದೊರೆಯುತ್ತದೆ. ಆದರೆ ಹಿರಿಯ ಅಥವಾ ಅನುಭವ ಹೊಂದಿರುವವರಿಗೆ ನೌಕರಿ ಸಿಗುವುದು ದುಸ್ತರವಾಗಿದೆ. ಕಾರಣ ಅನುಭವಸ್ಥ ಸಿಬ್ಬಂದಿಗಳಿಗೆ ದುಬಾರಿ ವೇತನ ನೀಡಬೇಕಾಗುತ್ತದೆ ಎಂದು. 
ಹೀಗಾಗಿ ಕೆಲವರು ಗುತ್ತಿಗೆ ಆಧಾರದ ಮೇಲೆ ಅಲ್ಪಾವಧಿಗೆ ಅಂದರೆ 6 ತಿಂಗಳು ಅಥವಾ 1 ವರ್ಷ ಕಾರ್ಯ ನಿರ್ವಹಣೆ ಮಾಡಲು ಒಪ್ಪಿಕೊಳ್ಳುತ್ತಾರೆ. ಹಾಲಿ ಪರಿಸ್ಥಿತಿಯಲ್ಲಿ ಐಟಿ ಕ್ಷೇತ್ರದಲ್ಲಿ ಶಾಶ್ವತ ಉದ್ಯೋಗ ಎಂಬುದು ನಿಜಕ್ಕೂ ಕನಸಿನ ಮಾತು. ಇದೇ ಕಾರಣಕ್ಕೆ ಹಲವರು ಬೇರೆ ಬೇರೆ ಕ್ಷೇತ್ರಗಳತ್ತ ಮುಖ ಮಾಡಿದ್ದು, ಬೇರೆ ಬೇರೆ ರಂಗದಲ್ಲಿ ತರಬೇತಿ ಪಡೆದು ಅತ್ತ ಮುಖ ಮಾಡುತ್ತಿದ್ದಾರೆ. ಇನ್ನು ಕೆಲವರು ತಮ್ಮದೇ ಸಣ್ಣ ತಂಡ ಮಾಡಿಕೊಂಡು ತಮ್ಮದೇ ಹೊಸ ಸಂಸ್ಥೆಯನ್ನು ಆರಂಭಿಸುತ್ತಾರೆ. ಈ ಪೈಕಿ ಯಶಸ್ಸು ಎಂಬುದು ಕೆಲವರಿಗೆ ಮಾತ್ರ. ಇಂದಿಗೂ ಸಾಕಷ್ಟು ಮಂದಿ ತಮ್ಮ ಉದ್ಯೋಗ ಸಂಬಂಧ ಸಂಸ್ಥೆಗಳ ವಿರುದ್ಧ ಕೋರ್ಟ್ ಕಚೇರಿಗಳ ಅಲೆಯುತ್ತಿದ್ದಾರೆ ಎಂದು ರಾಜೇಶ್ ನಟರಾಜನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com