ಬೆಂಗಳೂರು: ಕಳ್ಳತನಕ್ಕಾಗಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಉತ್ತರ ಭಾರತೀಯ ಮೂಲದ ಒಂಟಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಬಸವೇಶ್ವರನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕುರುಬರಹಳ್ಳಿಯ ಜೆ.ಸಿ.ನಗರ ನಿವಾಸಿ ದೇವರಾಜ್ (21) ಬಂಧಿತ ಆರೋಪಿಯೆಂದು ಹೇಳಲಾಗುತ್ತಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಆರೋಪಿ ತನ್ನ ಪೋಷಕರೊಂದಿಗೆ ಜೆ.ಸಿ.ನಗರದಲ್ಲಿ ನೆಲೆಸಿದ್ದು, ರಾಜಾಜಿನಗರದಲ್ಲಿ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಭಾರತೀಯ ಮೂಲದ ಮಹಿಳೆ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸಂತ್ರಸ್ತರ ಮಹಿಳೆ ನಗರದ ಖಾಸಗಿ ಕಂಪನಿಯಲ್ಲಿ ಅಕೌಟೆಂಡ್ ಆಗಿ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಬ್ಬದ ನಿಮಿತ್ತ ಇಬ್ಬರು ಸ್ನೇಹಿತಯೆರು ತಮ್ಮ ಊರಿಗೆ ತೆರಳಿದ್ದರು.
ನ.8 ರಂದು ರಾತ್ರಿ 9.30ರ ಸುಮಾರಿಗೆ ಕಾಮುಕ ಕಳ್ಳತನಕ್ಕೆಂದು ಮಹಿಳೆ ಮನೆ ಬಳಿ ಬಂದು ಕಾಲಿಂಗ್ ಬೆಲ್ ಒತ್ತಿದ್ದ. ಬಾಗಿಲು ತೆರೆಯುತ್ತಿದ್ದಂತೆಯೇ ಆರೋಪಿಯು ಮಹಿಳೆಯನ್ನು ತಳ್ಳಿಕೊಂಡು ಬಲವಂತವಾಗಿ ಮನೆ ಪ್ರವೇಶಿಸಿ, ಮಹಿಳೆಯ ಕೈ ಕಚ್ಚಿ, ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದ.
ಈತನ ವಿರುದ್ದ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಗಾಜು ಒಡೆದ ಪ್ರಕರಣವಿದೆ. ಅಲ್ಲದೆ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮಹಿಳೆ ಬಳಿ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ಕಳ್ಳತನಕ್ಕೆ ಹೋಗಿದ್ದ ಸಮಯದಲ್ಲಿ ಅತ್ಯಾಚಾರವೆಸಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.