ಬೆಂಗಳೂರು: ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಷ್ ಅವರ ಪಾರ್ಥಿವ ಶರೀರ ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋದತ್ತ ಸಾಗುತ್ತಿದೆ. 1800 ಸಾವಿರ ಕೆಜಿ ಹೂಗಳಿಂದ ಈ ವಿಶೇಷ ವಾಹನವನ್ನು ಆಲಂಕೃತಗೊಳಿಸಲಾಗಿದ್ದು, ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದಾರೆ.
ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಿರುವ ಈ ಮೆರವಣಿಗೆ ಹಲಸೂರು ಗೇಟ್ ಪೊಲೀಸ್ ಠಾಣೆ, ಮೈಸೂರು ಬ್ಯಾಂಕ್ ವೃತ್ತ, ಪ್ಯಾಲೇಸ್ ರಸ್ತೆ, ಕಾವೇರಿ ಜಂಕ್ಷನ್, ಭಾಷ್ಯಂ ಸರ್ಕಲ್, ಸ್ಯಾಂಕಿ ರಸ್ತೆ. ಮಾರಮ್ಮ ವೃತ್ತ, ಯಶವಂತಪುರ ಫ್ಲೇ ಓವರ್, ಮೆಟ್ರೋ ನಿಲ್ದಾಣದಿಂದ , ಆರ್ ಎಂಸಿ ಯಾರ್ಡ್, ಎಫ್ ಐಟಿನಿಂದ ಕಂಠೀರವ ಸ್ಟುಡಿಯೋದತ್ತ ಸಾಗಲಿದೆ.
ಪೊಲೀಸ್ ಸರ್ಪಗಾವಲಿನಲ್ಲಿ ಮೆರವಣಿಗೆ ಸಾಗುತ್ತಿದ್ದು, ಭದ್ರತೆಗಾಗಿ 11 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ಕು ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ ಮೂರು ಅರಸೇನಾ ಪಡೆ, 30 ಕೆಎಸ್ ಪಿಆರ್ , ಮೂರು ಸಿಎಆರ್ ತುಕಡಿಗಳನ್ನು ಬಳಸಿಕೊಳ್ಳಲಾಗಿದೆ.
ಮೆರವಣಿಗೆ ಸಾಗುವ ಮಾರ್ಗವನ್ನು ನಾಲ್ಕು ಸೆಕ್ಟರ್ ಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಸೆಕ್ಟರಿಗೂ ಡಿಸಿಪಿಗಳೂ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
Advertisement