ರಾಜ್ಯ
ಬೆಂಗಳೂರು ಅಭಿವೃದ್ಧಿಗೆ ರೂ.8,015 ಕೋಟಿ: ರಾಜ್ಯ ಸಚಿವ ಸಂಪುಟ ಅಸ್ತು
ಬೆಂಗಳೂರು ನಗರಾಭಿವೃದ್ಧಿಗಾಗಿ ರೂ.8,015 ಕೋಟಿ ನೀಡಲು ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ...
ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿಗಾಗಿ ರೂ.8,015 ಕೋಟಿ ನೀಡಲು ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
ನವ ಬೆಂಗಳೂರು ಯೋಜನೆ ಅಡಿಯಲ್ಲಿ ರೂ.8,015 ಕೋಟಿ ಹಣವನ್ನು ಮೀಸಲಿಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದಾರೆ.
ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್'ಬಿ, ಬಿಎಂಆರ್'ಸಿಎಲ್ ಮತ್ತು ಇತರೆ ಮೂಲಭೂತ ಸೌಕರ್ಯ ಯೋಜನೆಗಳಾದ ಎಲಿವೇಟೆಡ್ ಕಾರಿಡಾರ್ ಹಾಗೂ ರಿಂಗ್ ರೋಡ್ ಗಳಿಗೆ ನೀಡಿರುವ ಅನುದಾನವನ್ನು ಹೊರತುಪಡಿಸಿ, ಕೇವಲ ಬೆಂಗಳೂರು ನಗರಾಭಿವೃದ್ಧಿಗಾಗಿ ಮಾತ್ರ ಈ ಹಣವನ್ನು ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ರಾಜ್ಯದ ಹೆಮ್ಮೆ. ಬೆಂಗಳೂರು ಅಭಿವೃದ್ಧಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಮೂರು ವರ್ಷಗಳ ಕಾಲಾವಧಿಗೆ ಸಚಿವ ಸಂಪುಟ ನಗರಕ್ಕೆ ರೂ.8,015ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದ್ದಾರೆ.
ನವ ಬೆಂಗಳೂರು ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ ನಿರ್ವಹಣೆ, ಒಳಚರಂಡಿ ನಿರ್ಮಾಣ, ವೈಟ್ ಟಾಪಿಂಗ್ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.