ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಕುರಿತು ವಿಷಯ ಪ್ರಸ್ತಾಪ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ವಿಶ್ವಾಸಮತ ಯಾಚನೆಗೆ ನಾನು ಬೇಕೇಂದೇ ವಿಳಂಬ ಮಾಡುತ್ತಿದ್ದೇನೆ ಎಂಬ ಆರೋಪ ಸರಿಯಲ್ಲ. ಈ ಕುರಿತಂತೆ ಮಾತನಾಡುತ್ತಿರುವ ನಾಯಕರು ಮತ್ತು ಮಾಧ್ಯಮಗಳ ಬಗ್ಗೆ ನನಗೆ ಅನುಕಂಪವಿದೆ. ಯಾವುದೋ ಒಂದು ಪಕ್ಷಕ್ಕೆ ಅನುಕೂಲ ಮಾಡಿಕೊಡುವಂತಹ ಕಷ್ಟ ನನಗೇನೂ ಬಂದಿಲ್ಲ. ಓರ್ವ ಜವಾಬ್ದಾರಿಯುತ ಸ್ಪೀಕರ್ ಆಗಿ ನಾನು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಇತಿಹಾಸ ಪುಟ ಸೇರಬೇಕು. ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿರಬೇಕು ಎಂಬ ಮಹದಾಸೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ.