ಇಂದು ಬೆಳಗ್ಗೆ ಮಂಗಳೂರಿನ ನೇತ್ರಾವತಿ ನದಿಯ ಹೊಯ್ಗೆ ಬಜಾರ್ ಜಾಗದಲ್ಲಿ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿದ್ದು, ಅವರ ದೇಹ ಪತ್ತೆಯಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ದೇಶಾದ್ಯಂತ ಇರುವ ಎಲ್ಲ ಕಾಫಿ ಡೇ ಔಟ್ ಲೆಟ್ ಗಳ ಸೇವೆಯನ್ನು ಸ್ಥಗಿತಗೊಳಿಸಿ ಕೆಲಸಗಾರರಿಗೆ ರಜೆ ಘೋಷಣೆ ಮಾಡಲಾಗಿದೆ. ಸಂಸ್ಛೆಯ ಮೂಲಗಳ ಪ್ರಕಾರ ಇಂದು 240 ನಗರಗಳಲ್ಲಿರುವ ಸುಮಾರು 1,750 ಔಟ್ ಲೆಟ್ ಗಳನ್ನು ಮುಚ್ಚಲಾಗಿದ್ದು, ಎಲ್ಲ ಔಟ್ ಲೆಟ್ ಗಳಲ್ಲಿ ಸಿದ್ಧಾರ್ಥ್ ಅವರ ಸ್ಮರಣಾರ್ಥ ಅವರ ಭಾವಚಿತ್ರವಿರಿಸಿ ಪುಷ್ಪ ನಮನ ಸಲ್ಲಿಸಲಾಗಿದೆ.