ಬೆಂಗಳೂರು: ತೆರಿಗೆ ವಂಚನೆ, ಸಿದ್ದಾರ್ಥ ವೈದ್ಯ ಕಾಲೇಜಿನಲ್ಲಿ ನಿಯಮಬಾಹಿರ ಸೀಟು ಹಂಚಿಕೆ ಅಥವಾ ಮಾರಾಟ ಆರೋಪ ಸಂಬಂಧ ಎರಡನೇ ದಿನವೂ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಸದಾಶಿವನಗರದ ಮನೆ ಮತ್ತು ಅವರ ಅಣ್ಣನ ಮಗ ಆನಂದ್ ಮನೆಯಲ್ಲಿಯೂ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪರಮೇಶ್ವರ್ ನಿವಾಸದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ತಿ, ವಹಿವಾಟು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಪರಮೇಶ್ವರ್ ಅವರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.
ಪ್ರಾಂಶುಪಾಲ ಡಾ.ರವಿ ಪ್ರಕಾಶ್ ಅವರನ್ನು ಕೂರಿಸಿಕೊಂಡು ಖಾಸಗಿ ಕೋಣೆಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ನಿನ್ನೆ ವಶಪಡಿಸಿಕೊಂಡಿದ್ದ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟ್ ಕಡತಗಳ ದಾಖಲೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಕೋಲಾರದಲ್ಲಿರುವ ಕೇಂದ್ರ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಒಡೆತನದ ದೇವರಾಜು ಅರಸು ವೈದ್ಯಕೀಯ ಕಾಲೇಜಿನಲ್ಲಿ ಅಧಿಕಾರಿಗಳಿಂದ ಇಂದು ಕೂಡ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.
ಐಟಿ ಅಧಿಕಾರಿಗಳ ಮನವಿ ಮೇರೆಗೆ ಕಾಲೇಜು ಆವರಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಕಾಲೇಜಿನ ತಾಂತ್ರಿಕ ವಿಭಾಗದಲ್ಲಿ ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿರುವ ಆರ್. ಜಾಲಪ್ಪ ಅವರ ಮಗ ರಾಜೇಂದ್ರ ನಿವಾಸದಲ್ಲಿಯೂ ಐಟಿ ಅಧಿಕಾರಿಗಳು, ಬೆಳಗ್ಗೆಯಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ರಾತ್ರಿ ಐಟಿ ಇಲಾಖೆಯ ಅಧಿಕಾರಿಗಳು ಅಲ್ಲಿಯೇ ಮಲಗಿದ್ದು, ಇಂದು ಬೆಳಗ್ಗೆ ಎದ್ದು, ದೊಡ್ಡಬಳ್ಳಾಪುರದ ಇಂಜಿನಿಯರಿಂಗ್ ಕಾಲೇಜು, ಕೋಲಾರದ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ರಾಜೇಂದ್ರ, ಪತ್ನಿ ಸುಜಾತಾ, ರಾಕೇಶ್ ಮನೆಯಲ್ಲೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement