ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಮತ್ತೆ ಹಲವು ಮಕ್ಕಳ ಅಂಧಕಾರಕ್ಕೆ ಕಾರಣವಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಟಾಕಿ ಅಬ್ಬರಕ್ಕೆ ಕೇವಲ 2 ದಿನದಲ್ಲಿ ಬರೊಬ್ಬರಿ 40 ಮಕ್ಕಳು ಗಾಯಗೊಂಡಿದ್ದಾರೆ.
ಹೌದು.. ದೀಪಾವಳಿ ಹಬ್ಬದ ಖುಷಿಯಲ್ಲಿ ಪಟಾಕಿ ಸಿಡಿಸುವ ವೇಳೆ ವಿವಿಧೆಡೆ ಸಂಭವಿಸಿದ ಅವಘಡದಲ್ಲಿ ಮಕ್ಕಳು ಸೇರಿ ಸುಮಾರು 40ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಪಟಾಕಿ ಸಿಡಿದು 8 ಮಂದಿಯ ಕಣ್ಣಿಗೆ ಹಾನಿಯಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸೋಮವಾರ 10ಕ್ಕೂ ಅಧಿಕ ಮಂದಿಯ ಕಣ್ಣಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯೊಂದರಲ್ಲೇ ಅಕ್ಟೋಬರ್ 26 ರಿಂದ 28ರೊಳಗೆ ಸುಮಾರು 40 ಗಾಯಾಳುಗಳು ದಾಖಲಾಗಿದ್ದಾರೆ. ಅವರಲ್ಲಿ ಇಬ್ಬರ ಕಣ್ಣಿನ ರೆಟಿನಾಗೆ ಹಾನಿಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಯಶವಂತಪುರ ಹಾಗೂ ಬನ್ನೇರುಘಟ್ಟ, ನಾರಾಯಣ ನೇತ್ರಾಲಯಗಳಲ್ಲಿ 10ಕ್ಕೂ ಹೆಚ್ಚುಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಅಂತೆಯೇ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 10 ಮಂದಿ ದಾಖಲಾಗಿದ್ದು, ಬನಶಂಕರಿಯ ಅಗರ್ವಾಲ್ ಕಣ್ಣಾಸ್ಪತ್ರೆಯ ಒಂದು ಮಗು ಚಿಕಿತ್ಸೆಗೆ ದಾಖಲಾಗಿದೆ ಎಂದು ತಿಳಿದುಬಂದಿದೆ.
Advertisement