ಬೆಂಗಳೂರು: ನಿವೃತ್ತಿಯಾಗುವಷ್ಟರದಲ್ಲಿ ಭವಿಷ್ಯದ ಜೀವನಕ್ಕಾಗಿ ತಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕೂಡಿಡಬೇಕೆಂದು ಪರಿತಪಿಸುವ ಸರ್ಕಾರಿ ಉದ್ಯೋಗಿಗಳನ್ನು ನೋಡಿದ್ದೇವೆ. ಆದರೆ, ಇಡೀ ದೇಶ ಕೊರೋನಾ ಎಂಬ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ದಿಟ್ಟ ಹೋರಾಟಕ್ಕೆ ಸಹಾಯ ಹಸ್ತ ಚಾಚಿರುವ ಪೇದೆಯೊಬ್ಬರು, ತಮ್ಮ ಇಡೀ ತಿಂಗಳ ವೇತನವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ತುಮಕೂರು ಮೂಲದ 59 ವರ್ಷದ ಹನುಮಂತಯ್ಯ ಎಂಬುವವರು ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ಕಳೆದ 34 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ತಮ್ಮ ಇಡೀ ತಿಂಗಳ ವೇತನವನ್ನು ಪ್ರಧಾನಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದಾರೆ. ಅಲ್ಲದೆ, ಮನೆ ನಿರ್ವಹಣೆಗಾಗಿ ಸ್ನೇಹಿತನಿಂದ ರೂ.5,000ದಷ್ಟು ಸಾಲವನ್ನು ಪಡೆದುಕೊಂಡಿದ್ದಾರೆ.
ಪ್ರತೀ ತಿಂಗಳ 8ನೇ ತಾರೀಖಿನಂದು ವೇತನ ಹಾಕಲಾಗುತ್ತದೆ. ವೇತನ ಬಂದ 2 ಗಂಟೆಗಳಲ್ಲಿಯೇ ಸ್ನೇಹಿತನೊಂದಿಗೆ ಬ್ಯಾಂಕಿಗೆ ತೆರಳಿ, ಮ್ಯಾನೇಜರ್ ಜೊತೆ ಮಾತನಾಡಿ, ಆನ್'ಲೈನ್ ಅರ್ಜಿ ಪೂರ್ಣಗೊಳಿಸಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ತಿಂಗಳಿನಲ್ಲಿ ಎದುರಾಗುವ ವೆಚ್ಚ ಭರಿಸಲು ಇದೀಗ ನನ್ನ ಸ್ನೇಹಿತನಿಂದ ರೂ.5000 ಸಾಲ ಪಡೆದುಕೊಂಡಿದ್ದೇನೆಂದು ಹನುಮಂತಯ್ಯ ಅವರು ಹೇಳಿದ್ದಾರೆ.
ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರೈಲ್ವೇ ಇಲಾಖೆಯಲ್ಲಿ ಬೋಗಿಗಳನ್ನು ಐಸೋಲೇಷನ್ ವಾರ್ಡ್ ಗಳಾಗಿ ಪರಿವರ್ತಿಸುತ್ತಿರುವ ಸುದ್ದಿಗಳನ್ನು ನೋಡಿದ್ದೆ. ವೆಂಟಿಲೇಟರ್ ಹಾಗೂ ವೈದ್ಯಕೀಯ ಕಿಟ್ಸ್ ಗಳನ್ನು ಕೊಳ್ಳಲು ದೇಶಕ್ಕೆ ಹಣದ ಅಗತ್ಯವಿದೆ. ನಮ್ಮ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಹೆಚ್ಚಿನ ಹಣದ ಅಗತ್ಯವಿದೆ. ನಾನು ನೀಡುವ ಹಣ ಸಹಾಯಕ್ಕೆ ಬರುವುದಾದರೆ ನನಗೆ ಬಹಳ ಸಂತೋಷವಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಹನುಮಂತಯ್ಯ ಅವರ ಪತ್ನಿ ಮಾತನಾಡಿ, ನನ್ನ ಪತಿ ಯಾವಾಗಲೂ ಕೊಡುವ ಸ್ವಭಾವವುಳ್ಳವರಾಗಿದ್ದಾರೆಂದಿದ್ದಾರೆ.
Advertisement