ಬೆಂಗಳೂರು: ಚೀನಾದಲ್ಲಿ ಕೊರೋನಾ ವೈರಸ್ ವ್ಯಾಧಿ ವಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ತೀವ್ರ ಕೆಟ್ಟೆಚ್ಚರ ವಹಿಸಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಸಲಹೆಗಳನ್ನು ನೀಡಿದ್ದು, ಈ ವರೆಗೂ ಯಾರೊಬ್ಬರಲ್ಲಿಯೂ ವೈರಾಣು ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ತುರ್ತು ಸಭೆಯನ್ನು ನಡೆಸಿದ್ದು, ಕೊರೋನಾ ವೈರಸ್ ಅನ್ನು ಅಂತರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಆಪತ್ತು ಎಂದು ಘೋಷಿಸುವ ಕುರಿತು ಚರ್ಚೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಕೊರೋನಾ ವೈರಸ್ ವೊದು ಜಾತಿಯ ವೈರಸ್ ಆಗಿದೆ. ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್'ಗೆ ಕೊರೋನಾ ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ. ಸೋಂಕು ತಗುಲಿದವರು ತೀವ್ರ ಶೀತ, ಕೆಮ್ಮು, ಗಂಟಲು ಕಟ್ಟುವಿಕೆ, ಉಸಿರಾಟದ ತೊಂದರೆ, ತಲೆನೋವು, ಜ್ವರದ ಸಮಸ್ಯೆಗೆ ತುತ್ತಾಗುತ್ತಾರೆ.
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ಕಂಡು ಕೇಳರಿಯದ ರೀತಿ ಎನ್ನಬಹುದಾದ ತುರ್ತು ಕ್ರಮಗಳನ್ನು ಘೋಷಣೆ ಮಾಡಿದೆ.
830 ಮಂದಿಯಲ್ಲಿ ವೈರಾಣು ಕಂಡು ಬಂದಿದ್ದು, ಇದರಲ್ಲಿ 177 ಜನರ ಸ್ಥಿತಿ ಚಿಂತಾಜನಕವಾಗಿದೆ. ಸೋಂಕು ತಗುಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 34 ಮಂದಿ ಚಿಕಿತ್ಸೆ ಪಡೆದಿದ್ದು, ಇದೀಗ ಗುಣಮುಖರಾಗಿದ್ದಾರೆ. ಸಮುದ್ರ ಆಹಾರ ಮತ್ತು ಮಾಂಸಾಹಾರದಿಂದ ವುಹಾನ್ ನಲ್ಲಿ ಈ ವೈರಸ್ ಹರಡಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
Advertisement