ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಜನಸಂಖ್ಯೆ ಆಧಾರದ ಮೇಲೆ ರಾಜ್ಯದಲ್ಲಿ ಸೆರೋಸರ್ವೇ (ಸೆರೋ ಸಮೀಕ್ಷೆ) ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಐಸಿಎಂಆರ್ ದೇಶದಾದ್ಯಂತ ಸೆರೋ ಸರ್ವೇ ನಡೆಸಿದ್ದು, ಇದೇ ರೀತಿಯಲ್ಲಿಯೇ ರಾಜ್ಯದಲ್ಲಿಯೂ ಸಮೀಕ್ಷೆ ನಡೆಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ ಎನ್ನಲಾಗುತ್ತಿದೆ.
ಸೆರೋ ಸರ್ವೇ ನಡೆಸುವಂತೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಉಡುಪಿಯಲ್ಲಿ ಈ ಸಮೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಮೀಕ್ಷೆಯು ನಿರ್ದಿಷ್ಟ ಮಾದರಿ ಗಾತ್ರವನ್ನು ಒಳಗೊಂಡಿದ್ದು, ಹೆಚ್ಚಿನ-ಅಪಾಯ, ಮಧ್ಯಮ-ಅಪಾಯ ಮತ್ತು ಕಡಿಮೆ-ಅಪಾಯದ ಗುಂಪನ್ನು ಒಳಗೊಂಡಿರುತ್ತದೆ. ಇದು ರಾಜ್ಯದಲ್ಲಿ ಕೊರೊನಾವೈರಸ್ ಹರಡುವಿಕೆ ಅಥವಾ ಹರಡುವಿಕೆಯ ವೇಗವನ್ನು ಅಳೆಯುತ್ತದೆ. ಬೆಂಗಳೂರು ಮತ್ತು ಉಡುಪಿ ಬಳಿಕ ಸಮೀಕ್ಷೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮೀಕ್ಷೆಯನ್ನು ಜುಲೈ ಆರಂಭದಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ಜುಲೈ 15ರಿಂದ ಆರಂಭಗೊಳ್ಳುವ ನಿರೀಕ್ಷೆಗಳಿವೆ. ಇದಕ್ಕಾಗಿ ಸಮೀಕ್ಷೆಗೆ ನಾವು ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಮತ್ತು ಆರ್ಟಿ-ಪಿಸಿಆರ್ ಕಿಟ್ಗಳನ್ನು ಸಂಗ್ರಹಿಸಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಪ್ರಕಾಶ್ ಬಿ.ಜಿಯವರು ತಿಳಿಸಿದ್ದಾರೆ.
Advertisement