ಕೊರೋನಾ ವರದಿ ನೇರ ರೋಗಿಗಳಿಗೆ ನೀಡಬೇಡಿ ಎಂಬ ಆದೇಶ ರದ್ದು

ಕೊರೋನಾ ಸೋಂಕಿನ ನೆಗೆಟಿವ್ ಅಥವಾ ಪಾಸಿಟಿವ್ ವರದಿಯನ್ನು ಈಗ ಮತ್ತೆ ರೋಗಿಗಳಿಗೆ ನೀಡಲು ರಾಜ್ಯ ಸರ್ಕಾರ ಖಾಸಗಿ ಹಾಗೂ ಸರ್ಕಾರಿ ಪ್ರಯೋಗಾಲಯಗಳಿಗೆ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕಿನ ನೆಗೆಟಿವ್ ಅಥವಾ ಪಾಸಿಟಿವ್ ವರದಿಯನ್ನು ಈಗ ಮತ್ತೆ ರೋಗಿಗಳಿಗೆ ನೀಡಲು ರಾಜ್ಯ ಸರ್ಕಾರ ಖಾಸಗಿ ಹಾಗೂ ಸರ್ಕಾರಿ ಪ್ರಯೋಗಾಲಯಗಳಿಗೆ ಸೂಚನೆ ನೀಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಪ್ರಯೋಗಾಲಯಗಳು ನೇರವಾಗಿ ರೋಗಿಗಳಿಗೆ ರಿಪೋರ್ಟ್ ನೀಡುತ್ತಿರುವುದರಿಂದ ಅನಾಹುತಗಳು ನಡೆಯುತ್ತಿವೆ ಎಂದು ರಾಜ್ಯ ಸರ್ಕಾರ ಜೂ.27ರಂದು ರೋಗಿಗಳಿಗೆ ಸೋಂಕು ಫಲಿತಾಂಶ ನೇರವಾಗಿ ನೀಡದಂತೆ ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳಿಗೆ ನಿರ್ದೇಶಿಸಿ ಆದೇಶ ಹೊರಡಿಸಿತ್ತು.

ಶನಿವಾರ ಹೊಸ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ ಆಯುಕ್ತರು, ಜೂ.27ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಪ್ರಯೋಗಲಾಯಗಳು ಫಲಿತಾಂಶ ನೀಡುವ ಕುರಿತು ಈ ಹಿಂದಿನ ನಿಯಮವನ್ನೇ ಅನುಸರಿಸಬಹುದು. ಆದರೂ ನಿತ್ಯ ಕೊರೋನಾ ಪಾಸಿಟಿವ್/ನೆಗೆಟಿವ್ ಪ್ರಕರಣ ಐಸಿಎಂ ಪೋರ್ಟಲ್'ಗೆ ಅಪ್ಲೋಡ್ ಮಾಡಬೇಕು ಎಂದಿದ್ದಾರೆಂದು ಹೇಳಲಾಗುತ್ತಿದೆ. 

ಇದರಿಂದ ಇನ್ನು ಮೊದಲಿನಂತೆ ಸೋಂಕಿತರಿಗೆ ನೇರವಾಗಿ ಮೊಬೈಲ್ ಸಂದೇಶ ಅಥವಾ ದೂರವಾಣಿ ಕರೆ ಮಾಡಿ ಸೋಂಕಿನ ವಿಚಾರ ತಿಳಿಸಲಾಗುತ್ತದೆ. ಇದರಿಂದ ತಕ್ಷಣ ಆ್ಯಂಬುಲೆನ್ಸ್ ನೆರವು ಪಡೆದು ಕೊರೋನಾ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಾಗಲು ನೆರವಾಗಲಿದೆ. ಇತ್ತೀಚೆಗೆ ಸಚಿವ ಆರ್.ಅಶೋಕ್, ಪ್ರಯೋಗಾಲಯಗಳು ಸೋಂಕಿತರಿಗೆ ನೇರವಾಗಿ ಕರೆ ಮಾಡಿ ನೀವು ಪಾಸಿಟಿವ್ ಎಂದು ಹೇಳುತ್ತವೆ. ಇದರಿಂದ ಸೋಂಕಿತರು ಆಘಾತಕ್ಕೀಡಾಗುತ್ತಾರೆ. ಹೀಗಾಗಿ ಇನ್ನು ಫಲಿತಾಂಶವನ್ನು ಮೊದಲು ಐಸಿಎಂಆರ್ ಪೋರ್ಟಲ್'ಗೆ ಅಪ್'ಲೋಡ್ ಮಾಡಿ ಆರೋಗ್ಯ ಅಧಿಕಾರಿಗಳಿಗೆ ನೀಡಬೇಕು ಎಂದು ಹೇಳಿದ್ದರು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com