ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಕೊರೋನಾ ವೈರಸ್'ಗೆ ಚಿಕಿತ್ಸೆ ಪಡೆಯುತ್ತಿರುವ 105 ವರ್ಷದ ವೃದ್ಧ ವ್ಯಕ್ತಿಯೊಬ್ಬರಿಗೆ ರೆಮ್ಡೆಸಿವಿರ್ ಔಷಧಿ ನೀಡಲು ವೈದ್ಯರು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಕೇರ್ ಟೇಕರ್ ಒಬ್ಬರಿಂದ ವೃದ್ಧನಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದ್ದು, ಇದೀಗ ವೃದ್ಧ ವ್ಯಕ್ತಿಗೆ ಪ್ರಿಸ್ಟೈನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪ್ರೈವೇಟ್ ಲಿಮಿಟೆಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ವೃದ್ಧ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಅವರಲ್ಲಿ ಯಾವುದೇ ರೀತಿ ದೀರ್ಘಕಾಲಿಕ ರೋಗಗಳೂ ಕಂಡು ಬಂದಿಲ್ಲ ಎಂದು ವರದಿಗಳು ತಿಳಿಸಿವೆ.
ಆದರೆ, ಬುಧವಾರ ಸಂಜೆ ವೃದ್ಧ ವ್ಯಕ್ತಿಯ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು, ಜನರಲ್ ವಾರ್ಡ್ ನಿಂದ ಐಸಿಯುವಿಗೆ ಸ್ಥಳಾಂತರ ಮಾಡಲಾಗಿತ್ತು. ವ್ಯಕ್ತಿಯ ರಕ್ತದೊತ್ತಡ ಅತ್ಯಂತ ಕಡಿಮೆಯಾಗುತ್ತಿತ್ತು, ಹೀಗಾಗಿ ಐಸಿಯುವಿಗೆ ಸ್ಥಳಾಂತರಿಸಲಾಗಿತ್ತು. ಹೆಚ್ಚೆಚ್ಚು ದ್ರವದ ಪದಾರ್ಥಗಳನ್ನು ಸೇವನೆ ಮಾಡದೇ ಇರುವುದು ಹಾಗೂ ಆಹಾರ ಸೇವನೆ ಮಾಡದಿರುವುದರಿಂದ ಈ ರೀತಿಯಾಗಿರಬಹುದು. ಇದೀಗ ವ್ಯಕ್ತಿಗೆ ಹೆಚ್ಚು ಪರಿಣಾಮಕಾರಿಯಾಗಿರುವಂತಹ ಔಷಧಿಗಳನ್ನು ನೀಡುತ್ತಿದ್ದೇವೆಂದು ವೈದ್ಯರು ತಿಳಿಸಿದ್ದಾರೆ.
ವ್ಯಕ್ತಿಯೆ ಯಾವುದೇ ರೀತಿಯ ವೆಂಟಿಲೇಟರ್ ಸಪೋರ್ಟ್ ನೀಡಿಲ್ಲ. ಸ್ವಯಂ ಉಸಿರಾಡುತ್ತಿದ್ದಾರೆ. ಯಾವುದೇ ರೀತಿಯ ದೀರ್ಘಕಾಲಿಕ ರೋಗಗಳೂ ಇರದೇ ಇರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಸೋಂಕಿತರ ವ್ಯಕ್ತಿಗೆ ಇದೀಗ ರೆಮ್ಡೆಸಿವಿರ್ ಔಷಧಿ ನೀಡಲು ಚಿಂತನೆ ನಡೆಸಲಾಗುತ್ತಿದೆ. ಆದರೆ, ಔಷಧಿ ಅದನ್ನು ಇನ್ನೂ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಈಗಾಗಲೇ ಔಷಧಿಗೆ ಆರ್ಡರ್ ಮಾಡಲಾಗಿದೆ. ಆದರೆ ಔಷಧಿ ಕಂಪನಿಯಿಂದ ಔಷಧಿ ಇನ್ನೂ ದೊರೆತಿಲ್ಲ ಎಂದು ಡಾ.ಪ್ರಸನ್ನ ಅವರು ಹೇಳಿದ್ದಾರೆ.
ಸರ್ಕಾರವು ಶೇ 40 ರಷ್ಟು ಔಷಧಿಗಳನ್ನು ಸಂಗ್ರಹಿಸಿದೆ. ಇದೀಗ ನಾವು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರನ್ನು ಸಂಪರ್ಕಿಸಿ ನಮಗೆ ಕೆಲ ಔಷಧಿಗಳನ್ನು ಸರಬರಾಜು ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ, ಸಚಿವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಔಷಧಿಯನ್ನು ರೋಗಿಗೆ ನೀಡಲು ನಿರ್ಧರಿಸಿದ್ದು, ಕೋವಿಡ್ ವಿರುದ್ಧದ ಹೋರಾಟ ಮಾಡಲು ಮತ್ತು ವೈರಸ್ ವಿರುದ್ಧ ವಿಜಯ ಸಾಧಿಸಲು ಸರ್ಕಾರಕ್ಕೆ ಸಹಾಯ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.
Advertisement