ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಆತಂಕಗೊಂಡ ಚಿಕ್ಕಪೇಟೆಯ ಕೆಲವು ವ್ಯಾಪಾರಿ ಸಂಘಟನೆಗಳು ಸ್ವಯಂಪ್ರೇರಿತ ಲಾಕ್'ಡೌನ್'ಗೆ ಮುಂದಾಗಿರುವುದಕ್ಕೆ ಇನ್ನಿತರೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಸೋಮವಾರ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ ಹಾಗೂ ಚಿಕ್ಕಪೇಟೆಯನ್ನು ಬಂದ್ ಮಾಡುವುದಾಗಿ ಹೇಳಿದ್ದರು.
ಇದರಿಂತ ಆತಂಕಗೊಂಡ ಕೆಲ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿದ್ದರು. ಇದಕ್ಕೆ ಕೆಲ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿ, ಸರ್ಕಾರ ಇನ್ನೂ ಆದೇಶ ಹೊರಡಿಸಿಲ್ಲ. ಹೀಗಾಗಿ ಚಿಕ್ಕಪೇಟೆ ಎಂದಿನಂತೆ ತನ್ನ ವ್ಯಾಪಾರ ಹಾಗೂ ವಹಿವಾಟುಗಳನ್ನು ಮುಂದುವರೆಸಲಿದೆ ಎಂದು ಹೇಳಿದ್ದರು.
ಈ ನಡುವೆ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರೂ ಕೂಡ ಚಿಕ್ಕಪೇಟೆಗೆ ಭೇಟಿ ನೀಡಿ, ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಜನರು ಶಾಪಿಂಗಾಗಿ ಇಲ್ಲಿಗೆ ಬರುತ್ತಿದ್ದಾರೆ. ಈಗಾಗಲೇ ಪೊಲೀಸರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸೋಂಕಿತ ಪ್ರಕರಣಗಳು ಕಂಡು ಬಂದ ಕಟ್ಟಡ ಹಾಗೂ ಕಾಂಪ್ಲೆಕ್ಸ್ ಗಳನ್ನು ಮಾತ್ರ ಬಂದ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಹೇಳಿಕೆಯ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ಅವರು ಹೇಳಿಕೆ ನೀಡಿದರು. ಮುಖ್ಯಮಂತ್ರಿಗಳ ನಿರ್ದೇಶನದಂತೆ ಮೂರೂ ಮಾರುಕಟ್ಟೆಗಳನ್ನು ಬಂದ್ ಮಾಡುವುದಾಗಿ ತಿಳಿಸಿದರು.
ಮಾರುಕಟ್ಟೆ ಬಂದ್ ಮಾಡುವುದಿಲ್ಲ ಎಂದು ಹೇಳುತ್ತಿರುವವರು ಸೋಂಕಿತ ಪ್ರಕರಣಗಳು ಹೆಚ್ಚಾದರೆ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆಯೇ? ಚಿಕ್ಕಪೇಟೆ ಈಗಾಗಲೇ ಕಂಟೈನ್ಮೆಂಟ್ ಝೋನ್ ನಲ್ಲಿದೆ ಎಂದರು.
ಇನ್ನು ಕೆಲ ವ್ಯಾಪಾರಿಗಳ ಮನವಿಯಂತೆ ಹಾಗೂ ಆಯುಕ್ತರ ಆದೇಶದಂತೆ ಅಂತಿಮವಾಗಿ ಮೂರೂ ಮಾರುಕಟ್ಟೆಗಳನ್ನು ಬಂದ್ ಮಾಡಲಾಯಿತು.
Advertisement