ಕೆಂಗೇರಿಯಲ್ಲಿ ಎರಡು ಪ್ರತ್ಯೇಕ ಅಪಘಾತ: ಇಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಸಾವು

ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಂಜಿನಿಯರ್ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ದಾವಣಗೆರೆ ಮೂಲದ ನಿಂಗನಗೌಡ (23) ಹಾಗೂ ರಾಜರಾಜೇಶ್ವರಿ  ನಗರದ ಅನಿಲ್ ಕುಮಾರ್ (60)  ಮೃತಪಟ್ಟವರು. ಬೊಮ್ಮನಹಳ್ಳಿಯ  ಖಾಸಗಿ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ನಿಂಗನಗೌಡ ಅವರು  ಸಹಪಾಠಿಯಾಗಿದ್ದ ಹರ್ಷಿತಾ (22) ಅವರನ್ನು ಬುಲೆಟ್ ಬೈಕ್‌ನಲ್ಲಿ ಕೂರಿಸಿಕೊಂಡು ನೈಸ್  ರಸ್ತೆಯಲ್ಲಿ ರಾತ್ರಿ 11.30ರ ವೇಳೆ ಜಾಲಿ ರೈಡ್ ಗೆ ಹೋಗಿದ್ದರು.

ಕೆಂಗೇರಿಗೆ ಹೋಗುವ  ಮಾರ್ಗ ಮಧ್ಯೆ ಕೆರೆ ಕೋಡಿ ಬಳಿ ಕೆಟ್ಟು ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ  ಡಿಕ್ಕಿ ಹೊಡೆದು ನಿಂಗನಗೌಡ ಸ್ಥಳದಲ್ಲೇ ಮೃತಪಟ್ಟರೆ ಹರ್ಷಿತಾ ಗಾಯಗೊಂಡು, ಸ್ಥಳೀಯ  ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು  ವಿಶ್ವವಿದ್ಯಾನಿಲಯದ ನಿವೃತ್ತ ಉದ್ಯೋಗಿಯಾಗಿದ್ದ ಅನಿಲ್ ಕುಮಾರ್ ಅವರು ಮಧ್ಯಾಹ್ನ 12  ರ  ವೇಳೆ ಸ್ಕೂಟರ್ ನಲ್ಲಿ ದೊಡ್ಡ ಬೆಲೆಯ ಶೆಲ್ ಪೆಟ್ರೋಲ್ ಬಂಕ್ ಬಳಿ ಬರುವಾಗ ಹಿಂದಿನಿಂದ  ಬರುವಾಗ ಟಾಟಾ ಏಸ್ ಲಗೇಜ್ ವಾಹನ ಡಿಕ್ಕಿ ಹೊಡೆದಿದೆ.

ಗಂಭೀರವಾಗಿ ಗಾಯಗೊಂಡಿದ್ದ  ರಾಜರಾಜೇಶ್ವರಿ ನಗರದ ಅನಿಲ್ ಕುಮಾರ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ  ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಗೇರಿ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಶಿವಸ್ವಾಮಿ  ಅವರು ಈ ಎರಡೂ ಘಟನೆಗಳ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com