ವನ್ಯಜೀವಿ ದಾಳಿ: ಮೃತರ ಕುಟುಂಬಗಳ ಪರಿಹಾರ ಧನ 10 ಲಕ್ಷ ರೂ. ಹೆಚ್ಚಳದ ಪ್ರಸ್ತಾವ- ಆನಂದ್ ಸಿಂಗ್

ರಾಜ್ಯದಲ್ಲಿ ಆನೆ ಸೇರಿದಂತೆ ಇತರ ವನ್ಯ ಜೀವಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ನೀಡುವ ಪರಿಹಾರದ ಮೊತ್ತವನ್ನು 7.5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಏರಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿರಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ವಿಧಾನಸಭೆಗೆ ಇಂದು  ತಿಳಿಸಿದರು
ಸಚಿವ ಆನಂದ್ ಸಿಂಗ್
ಸಚಿವ ಆನಂದ್ ಸಿಂಗ್
Updated on

ಬೆಂಗಳೂರು: ರಾಜ್ಯದಲ್ಲಿ ಆನೆ ಸೇರಿದಂತೆ ಇತರ ವನ್ಯ ಜೀವಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ನೀಡುವ ಪರಿಹಾರದ ಮೊತ್ತವನ್ನು 7.5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಏರಿಸುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿರಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ವಿಧಾನಸಭೆಗೆ ಇಂದು  ತಿಳಿಸಿದರು

ಶೂನ್ಯವೇಳೆಯಲ್ಲಿ ಕಾಡಾನೆ ದಾಳಿ ಕುರಿತ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಾಡಾನೆ ದಾಳಿ ಪ್ರಕರಣಗಳು ಇಳಿಮುಖವಾಗಿದೆ. ವನ್ಯಜೀವಿಗಳು ನಾಡಿಗೆ ಪ್ರವೇಶಿಸುವುದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು. 

ಈಗಾಗಲೇ ಪರಿಹಾರದ ಮೊತ್ತವನ್ನು 5 ಲಕ್ಷ ರೂ.ಗಳಿಂದ 7.5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಮೃತರ ಕುಟುಂಬಗಳಿಗೆ ಈಗಾಗಲೇ ನೀಡಲಾಗುತ್ತಿರುವ ಐದು ವರ್ಷಗಳ ಅವಧಿಯ 5 ಸಾವಿರ ರೂ. ತಿಂಗಳ ಮಾಶಾಸನವನ್ನು 5 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗುವುದು. ಈ ಪ್ರಸ್ತಾವನೆಯನ್ನು ಈಗಾಗಲೇ ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ ಎಂದು ವಿವರಿಸಿದರು. 

ಇದಕ್ಕೂ ಮುನ್ನ ಈ  ಪ್ರಸ್ತಾಪಿಸಿದ ಶಾಸಕ ಎ.ಟಿ.ರಾಮಸ್ವಾಮಿ, ಕಾಡಾನೆಗಳ ನಿರಂತರ ಉಪಟಳದಿಂದ ಅರಣ್ಯದ ಸಮೀಪದ ಹಳ್ಳಿಗಳ ರೈತರು ಬಸವಳಿದಿದ್ದಾರೆ. ಅನೇಕ ಕಡೆ ಜೀವಹಾನಿ ಸಂಭವಿಸಿದೆ. ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರದ ಕೊರತೆ ಹೆಚ್ಚಾಗಿದ್ದು, ವನ್ಯಜೀವಿಗಳು ನಾಡಿನ ಕಡೆಗೆ ಬರುವ ಭೀತಿ ಹೆಚ್ಚಾಗಿದೆ. ಇದನ್ನು ತಡೆಯಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. 

ಇದಕ್ಕೆ ಧ್ವನಿಗೂಡಿಸಿದ ಶಾಸಕ ಎಚ್.ಕೆ.ಕುಮಾರಸ್ವಾಮಿ, ಸಕಲೇಶಪುರ, ಆಲೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಅರಣ್ಯಾಧಿಕಾರಿಗಳು ಆನೆಗಳನ್ನು ಹಿಡಿಯಲು ಸರ್ಕಾರದ ಅನುಮತಿಗಾಗಿ ಕಾದು ಕುಳಿತಿರುತ್ತಾರೆ. ಇತ್ತ ಆನೆಗಳು ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಸಮಸ್ಯೆಯಿಂದ ತಾವು ಕ್ಷೇತ್ರದ ಜನರಿಗೆ ಉತ್ತರ ಹೇಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಇದನ್ನು ತಡೆಯಲು ಅರಣ್ಯಾಧಿಕಾರಿಗಳಿಗೆ, ಒಂಟಿ ಆನೆಗಳು ಕಂಡಲ್ಲಿ ಅದನ್ನು ಸೆರೆಹಿಡಿಯುವ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು. 

ಆಗ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲೆಯಲ್ಲಿ ಕೂಡ ಆನೆಗಳ ಹಾವಳಿ ಮುಂದುವರಿದಿದೆ. ಅವುಗಳನ್ನು ಹಿಡಿಯಲು ಅರಣ್ಯ ಇಲಾಖೆ ಕಂದಕಗಳನ್ನು ನಿರ್ಮಿಸಿದೆಯಾದರೂ, ಪ್ರತಿ ಆರು ತಿಂಗಳಿಗೊಮ್ಮೆ ಅದನ್ನು ದುರಸ್ತಿಗೊಳಿಸದಿದ್ದಲ್ಲಿ ಅದು ನಿಷ್ಪ್ರಯೋಜಕವಾಗುತ್ತದೆ. ರೈಲ್ವೆ ಹಳಿಗಳ ಅಳವಡಿಕೆ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರು. 

ಅರಣ್ಯದಲ್ಲಿ ಅವುಗಳಿಗೆ ಮೇವಿನ ಕೊರತೆ ಉಂಟಾಗಿದರಿಂದ ಅವುಗಳು ಆಹಾರ ಅರಸುತ್ತಾ ಕಾಡಾನೆಗಳು ನಾಡಿನತ್ತ ಪಯಣಿಸುತ್ತಿವೆ. ಆದ್ದರಿಂದ ಕಾಡಿನಲ್ಲಿರುವ ಟೀಕ್ ಮರಗಳನ್ನು ತೆಗೆದು, ಹಲಸು, ಮಾವು ಮತ್ತಿತರರ ಆನೆಗಳ ಮೇವಿಗೆ ಉಪಯುಕ್ತವಾಗುವಂತಹ ಮರಗಳನ್ನು ನೆಡಬೇಕು. ಅಲ್ಲಲ್ಲಿ ಕೆರೆಗಳನ್ನು ತೋಡಿ, ಕುಡಿಯುವ ನೀರು ಒದಗಿಸಬೇಕು ಎಂದು ಸಲಹೆ ನೀಡಿದರು. 

ಈ ಸಲಹೆಗಳಿಗೆ ಪಕ್ಷಾತೀತವಾಗಿ ಹಲವು ಶಾಸಕರು ಧ್ವನಿಗೂಡಿಸಿದರು. ಇದು ಗಂಭೀರ ಸಮಸ್ಯೆಯಾಗಿದ್ದು, ಕೇವಲ ಚರ್ಚೆಗೆ ಸೀಮಿತವಾಗಬಾರದು. ಪರಿಹಾರ ಕ್ರಮಗಳನ್ನು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. 

ಆಗ ಆನಂದ್ ಸಿಂಗ್,  ಈ ಸಂಬಂಧ ಸಂಬಂಧಿಸಿದ ಕ್ಷೇತ್ರಗಳ ಶಾಸಕರು, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com