ಇಬ್ರಾಹಿಂ ಕಥೆಗೆ ಕೆರಳಿ ಕೆಂಡವಾದ ಬಿಜೆಪಿ, ಸದನದಿಂದ‌ ಹೊರನಡೆದ ತೇಜಸ್ವಿನಿಗೌಡ: ಹೇಳಿಕೆ ವಾಪಸ್ ಪಡೆದ ಇಬ್ರಾಹಿಂ

ಸದಾ ಸ್ವಾರಸ್ಯಕರ ಘಟ‌ನೆಗಳು, ಕಥೆಗಳು, ಹೇಳಿಕೆಗಳ ಮೂಲಕ‌ ಸದನದಲ್ಲಿ ಹಾಸ್ಯದ ಹೊನಲು‌ಹರಿಸುವ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಇಂದು ಹೇಳಿಕೆ ಕಥೆಯೊಂದಕ್ಕ ಬಿಜೆಪಿ ಸದಸ್ಯರು ಕೆರಳಿ ಕೆಂಡವಾದ ಪ್ರಸಂಗ ನಡೆಯಿತು.
ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ
ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ
Updated on

ಬೆಂಗಳೂರು: ಸದಾ ಸ್ವಾರಸ್ಯಕರ ಘಟ‌ನೆಗಳು, ಕಥೆಗಳು, ಹೇಳಿಕೆಗಳ ಮೂಲಕ‌ ಸದನದಲ್ಲಿ ಹಾಸ್ಯದ ಹೊನಲು‌ಹರಿಸುವ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಇಂದು ಹೇಳಿಕೆ ಕಥೆಯೊಂದಕ್ಕ ಬಿಜೆಪಿ ಸದಸ್ಯರು ಕೆರಳಿ ಕೆಂಡವಾದ ಪ್ರಸಂಗ ನಡೆಯಿತು.

ಹೇಳಿಕೆ ಖಂಡಿಸಿ ತೇಜಸ್ವಿನಿಗೌಡ ಸದನದಿಂದ ಹೊರನಡೆದರು ನಂತರ ಇಬ್ರಾಹಿಂ ತಮ್ಮ ಹೇಳಿಕೆಯನ್ನೂ ವಾಪಸ್ ಪಡೆಯಬೇಕಾಯಿತು. ವಿಧಾನ ಪರಿಷತ್ ಕಲಾಪದಲ್ಲಿ ಸಂವಿಧಾನ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿ.ಎಂ ಇಬ್ರಾಹಿಂ, ಸಿಎಎ ಬಗ್ಗೆ ಪ್ರಸ್ತಾಪ ಮಾಡಿದರು. ಸಿಎಎಯಲ್ಲಿ ಐದು ಜಾತಿ ಸೇರಿಸಿದ್ದಾರೆ. ಆದರೆ ಮುಸಲ್ಮಾನರ ಕೈಬಿಟ್ಟಿದ್ದಾರೆ. ಕಾರಣ ಕೇಳಿದರೆ, ನೆರೆ ರಾಷ್ಟ್ರದ ಅಲ್ಪಸಂಖ್ಯಾತರನ್ನು ಮಾತ್ರ ಸೇರಿಸಿದ್ದೇವೆ ಎಂದು ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ ಎಂದರು.

ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು, ಭಾರತದ ಪೌರತ್ವ ಬೇಕು ಎನ್ನುವವರು ಇಲ್ಲಿಯೇ ಇರಬೇಕಿತ್ತು. ಯಾಕೆ‌ ಹೋಗಬೇಕಿತ್ತು, ಪಾಕಿಸ್ತಾನ, ಬಾಂಗ್ಲಾ, ಮುಸಲ್ಮಾನರಿಗೆ ಪೌರತ್ವ ಕೊಡಿ ಎಂದು ಓಪನ್ ಸ್ಟೇಟ್ ಮೆಂಟ್ ಕೊಡಿ ಎಂದು ಬಿಜೆಪಿಯ ರವಿಕುಮಾರ್ ಮತ್ತು ತೇಜಸ್ವಿನಿಗೌಡ ತಿರುಗೇಟು ನೀಡಿದರು. ನಂತರ ಮಾತು ಮುಂದುವರೆಸಿದ ಇಬ್ರಾಹಿಂ, ಚುನಾವಣಾ ವ್ಯವಸ್ಥೆ ಕ್ಷೀಣಿಸಿದೆ, ಜಗತ್ತಿನ ಯಾವುದೇ ದೇಶವೂ ಒಪ್ಪದ ಇವಿಎಂ ಮೇಲೆ ಯಾಕೆ ಅಷ್ಟು‌ ಮೋಹ, ಎಲ್ಲೋ‌ ಒಂದು ಕಡೆ ಗೋಲ್ ಮಾಲ್ ಇದೆ ಎನ್ನುತ್ತಿದ್ದಂತೆ ಇದು ನೀವೇ ತಂದಿದ್ದು ಎಂದು ಬಿಜೆಪಿ‌ ಸದಸ್ಯರು ಕಾಲೆಳೆದರು. ನಾವಿದ್ದಾಗ ಗೋಲ್ ಮಾಲ್ ಇರಲಿಲ್ಲ, ಈಗ ಗೋಲ್ ಮಾಲ್ ಆಗುತ್ತಿದೆ ಎಂದು ಬಿಜೆಪಿ ಸದಸ್ಯರಿಗೆ ಇಬ್ರಾಹಿಂ ತಿರುಗೇಟು ನೀಡಿದರು. ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆರೋಪ, ಪ್ರತ್ಯಾರೋಪ ನಡೆಯಿತು.

ನಂತರ ಇವಿಎಂ ನಾವೇ ತಂದಿದ್ದು, ಒಪ್ಪುತ್ತೇವೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಅವಕಾಶದಂತೆ ನೀವು ಯಾಕೆ ಬದಲಾಯಿಸಲ್ಲ, ಇವಿಎಂ ಮೇಲೆ ನನಗೆ ಅನುಮಾನ ಇದೆ. ಇದು ರಾಮರಾಜ್ಯ. ಅಂದು ರಾಮ ಸೀತೆಯ ಮೇಲೆ ಅನುಮಾನ ಬಂದಾಗ ಸ್ವತಃ ಪತ್ನಿಯನ್ನು ತ್ಯಾಗ ಮಾಡಿದ್ದ ಹಾಗಿರುವಾಗ ನೀವು ಇವಿಎಂ ತ್ಯಾಗ ಮಾಡಲ್ಲವೇ ಎಂದು ಬಿಜೆಪಿಯ ಕಾಲೆಳೆದರು. ನಂತರ ತಮ್ಮ ಎಂದಿನ‌ ಹಾಸ್ಯ ಶೈಲಿಯಲ್ಲಿ‌ ಕಥೆಯೊಂದರ ಸನ್ನಿವೇಶ ಉಲ್ಲೇಖಿಸುತ್ತಾ ಈಗ ಎಲ್ಲಿಯೇ ಕೆಲಸ ಕೇಳಲು ಹೋದರೆ ಅನುಭವ ಕೇಳುತ್ತಾರೆ. ಅದಕ್ಕೆ ನಾ‌ನು ನಿನ್ನ ಮಗಳನ್ನು ಕೊಡುವಾಗ ಅಳಿಯನ ಅನುಭವ ಕೇಳಿದ್ದಿರಾ ಎಂದೆ ಎನ್ನುತ್ತಿದ್ದಂತೆ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಸೇರಿದಂತೆ ಇತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮದುವೆಗೆ ಮುನ್ನ ಅನುಭವ ಕೇಳುತ್ತೀರಲ್ಲಾ ಇದು ಮಹಿಳೆಯರಿಗೆ ಮಾಡುತ್ತಿರುವ ಅಪಮಾನ ಎಂದು ಇಬ್ರಾಹಿಂ ಹೇಳಿಕೆಯನ್ನು ಖಂಡಿಸಿದರು.

ಇಬ್ರಾಹಿಂ ಮಾತಿಗೆ ಕೆರಳಿ ಕೆಂಡವಾದ ತೇಜಸ್ವಿನಿ ಗೌಡ, ಇಬ್ರಾಹಿಂ ಅವರ ಮಾತಿನಿಂದ ನಮಗೆ ನೋವಾಗಿದೆ, ಬೇಕಾದಂತೆ ಮಾತನಾಡುವುದಾದರೆ ನಾನು ಹೊರ ಹೋಗುತ್ತೇನೆ ಇದು ಸಂತೆಯಲ್ಲ, ಮಹಿಳೆಯರಿಗೆ ಅವಮಾನ ಮಾಡುತ್ತೀದ್ದೀರ ಎನ್ನುತ್ತಾ ಸದನದಿಂದ ಹೊರನಡೆದರು. ನಂತರ ಬಿಜೆಪಿ‌ ಸದಸ್ಯರು ಇಬ್ರಾಹಿಂ ವಿರುದ್ಧ ಮುಗಿಬಿದ್ದರು. ನಿಮ್ಮ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದಾಗ ಅನುಭವ ಕೇಳಿದ್ರಾ ಎಂದು ಇಬ್ರಾಹಿಂರನ್ನು ಪ್ರಶ್ನಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸಿಎಂ ಇಬ್ರಾಹಿಂ ಮಾತನ್ನು ಕಡಿತದಿಂದ ತೆಗೆಯಬೇಕು ಎಂದು ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ಸದನದಲ್ಲಿ ಹೇಗೆ ಮಾತನಾಡಬೇಕು ಅಂತ ನಿಯಮ ಇದೆ ಅದು ಎಲ್ಲರಿಗೂ‌ ಗೊತ್ತಿದೆ, ಕೆಲವೊಮ್ಮೆ ಮಾತ‌ನಾಡುವಾಗ ಹೆಚ್ಚುಕಡಿಮೆ ಆಗುವುದು ಸಹಜ ಈಗ ಇಬ್ರಾಹಿಂ ತಪ್ಪಾಗಿ ಹೇಳಿದ್ದನ್ನು ವಿತ್ ಡ್ರಾ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಹೊರಟ್ಟಿ ಸಲಹೆಯಂತೆ ಸಿಎಂ ಇಬ್ರಾಹಿಂ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಸದನಕ್ಕೆ ತಿಳಿಸುತ್ತಾ, ನನಗೂ ಎಂಟು ಮಂದಿ ಹೆಣ್ಣು ಮಕ್ಕಳಿದ್ದಾರೆ. 3 ಮಂದಿಗೆ ಮದುವೆ ಆಗಿದೆ, 5 ಮಂದಿ ಆಗುವವರು ಇದ್ದಾರೆ ಎನ್ನುತ್ತಾ ಗೊಂದಲ ಗದ್ದಲಕ್ಕೆ ತೆರೆ ಎಳೆದರು. ಇಬ್ರಾಹಿಂ ಹೇಳಿಕೆ ಹಿಂಪಡೆಯುತ್ತಿದ್ದಂತೆ ತೇಜಸ್ವಿನಿಗೌಡ ಮತ್ತೆ ಕಲಾಪಕ್ಕೆ ಹಾಜರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com