ಬೆಂಗಳೂರು: ಕೊರೋನಾ ವೈರಸ್ ಮೆಟ್ರೋ ಕಾಮಗಾರಿ ಮೇಲೂ ಗಂಭೀರ ಪರಿಣಾಮ ಬೀರತೊಡಗಿದ್ದು, ಕಾರ್ಮಿಕರ ಕೊರತೆಯಿಂದಾಗಿ ನಗರದಲ್ಲಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
72.1 ಕಿಮೀಗಳ ಮೆಟ್ರೋ ಕಾಮಗಾರಿ ಕಾರ್ಯ ಪ್ರಗತಿಯಲ್ಲಿದ್ದು, ಇದೀಗ ಕೊರೋನಾ ಭೀತಿಯಿಂದಾಗಿ ಕಾರ್ಮಿಕರು ಕೆಲಸಕ್ಕೆ ಬರಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಕಾಮಗಾರಿ ಕಾರ್ಯ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ.
ಯಲಚೇನಹಳ್ಳಿ-ಅಂಜನಾಪುರದಲ್ಲಿ 6.29 ಕಿಮೀ, 8.81 ಕಿಮೀ ಉದ್ದದ ಮೈಸರು ರಸ್ತೆ-ಕೆಂಗೇರಿ ಮಾರ್ಗವನ್ನು ನವೆಂಬರ್ 1 ರೊಳಗಾಗಿ ಪೂರ್ಣಗೊಳಿಸುವುದಾಗಿ ಬಿಎಂಆರ್'ಸಿಎಲ್ ಘೋಷಣೆ ಮಾಡಿತ್ತು.
ಬಿಎಂಆರ್'ಸಿಎಲ್ ಯೋಜನಾ ನಿರ್ದೇಶಕ ರಾಧಾಕೃಷ್ಣ ಮಾತನಾಡಿ, ಈಶಾನ್ಯಭಾಗದಿಂದಲೇ ಬಹುತೇಕ ಕಾರ್ಮಿಕರು ಕಾಮಗಾರಿ ಕಾರ್ಯಕ್ಕೆ ಬಂದಿದ್ದಾರೆ. 1,000 ಹೆಚ್ಚು ಕಾರ್ಮಿಕರಿಗೆ ನಗರದಲ್ಲಿ ವಸತಿ ಸೌಕರ್ಯ ಒದಗಿಸಲಾಗಿದೆ. ಇದೀಗ ವೈರಸ್ ಗೆ ಹೆದರುತ್ತಿರುವ ಕಾರ್ಮಿಕರು ಕೆಲಸಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರರಿಗೆ ಕಾರ್ಮಿಕರ ಮೇಲೆ ಒತ್ತಡ ಹೇರದಂತೆ ಸೂಚನೆ ನೀಡಿದ್ದೇವೆ. ಪ್ರಸ್ತುತ ಕೇವಲ 4,000 ಕೆಲಸಗಾರರು ಮಾತ್ರ ಕಾಮಗಾರಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದೇ ಆದರೆ, ಎರಡನೇ ಹಂತದ ಮೆಟ್ರೋ ಉದ್ಘಾಟನೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
Advertisement
Advertisement