ಕಲಬುರಗಿ: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಬಯೋ ಮೆಟ್ರಿಕ್ ಬದಲು ಮೊಬೈಲ್ ಓಟಿಪಿ ಆಧಾರದ ಮೇಲೆ ಪಡಿತರ ವಿತರಿಸಲು ತೀರ್ಮಾನಿಸಲಾಗಿದೆ.
ಆಧಾರ್ ಆಧಾರಿತ ಮೊಬೈಲ್ ಓ.ಟಿ.ಪಿ. ಮೂಲಕ ಪಡಿತರ ವಿತರಣೆಗೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಪಡಿತರ ಅಂಗಡಿದಾರರಿಗೆ ಸೂಚನೆ ನೀಡಿದ್ದಾರೆ. ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ ಆಧಾರ್ನಲ್ಲಿ ನೋಂದಾಯಿಸಿದ್ದರೆ ಮಾತ್ರ ಅಂತಹ ಪಡಿತರ ಚೀಟಿದಾರರ ಮೊಬೈಲ್ಗೆ ಒ.ಟಿ.ಪಿ ಬರಲಿದೆ. ಒ.ಟಿ.ಪಿ ಯನ್ನು ನೋಂದಣಿ ಮಾಡಿಕೊಂಡು ಎಫ್.ಪಿ.ಎಸ್.ಅಂಗಡಿಯವರು ಪಡಿತರದಾರರಿಗೆ ಪಡಿತರ ವಿತರಿಸಬೇಕು.
ಪಡಿತರ ಚೀಟಿದಾರರ ಮೊಬೈಲ್ ಸಂಖ್ಯೆ ಆಧಾರ್ನಲ್ಲಿ ನೋಂದಣಿಯಾಗದೇ ಇದ್ದ ಸಂದರ್ಭದಲ್ಲಿ ಪಡಿತರ ಚೀಟಿದಾರರು ತರುವ ಮೊಬೈಲ್ ಸಂಖ್ಯೆಯನ್ನು ವರ್ತಕರಿಗೆ ನೀಡಬೇಕು. ಆಗ ನ್ಯಾಯಬೆಲೆ ಅಂಗಡಿ ವರ್ತಕರು ಮೊಬೈಲ್ ಸಂಖ್ಯೆ ದೃಢೀಕರಣ ಮಾಡಿಕೊಂಡು ಅದನ್ನು ದತ್ತಾಂಶದಲ್ಲಿ ನಮೂದಿಸಿದಾಗ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ. ರವಾನೆಯಾಗುತ್ತದೆ. ಇದನ್ನು ಬಳಸಿಕೊಂಡು ಪಡಿತರ ವಿತರಿಸಬಹುದು. ಆದರೆ ಒಂದು ಪಡಿತರ ಚೀಟಿಗೆ ನೀಡಿದ ಮೊಬೈಲ್ ಸಂಖ್ಯೆಯನ್ನು ಇನ್ನೊಂದು ಪಡಿತರ ಚೀಟಿಗೆ ನೀಡಲು ಅವಕಾಶವಿರುವುದಿಲ್ಲ.
ಇನ್ನೂ ಪಡಿತರ ಚೀಟಿದಾರರ ಕುಟುಂಬದ ಸದಸ್ಯರಲ್ಲಿ ಯಾರ ಬಳಿಯೂ ಮೊಬೈಲ್ ಇಲ್ಲದೇ ಹೋದಲ್ಲಿ ಅಂತಹ ಪ್ರಕರಣಗಳಲ್ಲಿ ಪಡಿತರ ಚೀಟಿದಾರರಿಗೆ ಈಗಾಗಲೇ ಲಭ್ಯವಿರುವ ಬಯೊಮೆಟ್ರಿಕ್ ಆಧಾರಿತವೇ ಪಡಿತರ ವಿತರಣೆ ಮಾಡಬೇಕು. ಬಯೊ ಮೆಟ್ರಿಕ್ ಆಧಾರದ ಮೇಲೆ ಪಡಿತರ ನೀಡುವ ಸಂದರ್ಭದಲ್ಲಿ ಶುಚಿತ್ವ ಕಾಪಾಡುವ ಸಂಬಂಧ ನ್ಯಾಯಬೆಲೆ ಅಂಗಡಿಗಳಲ್ಲಿ ನೀರು, ಸಾಬೂನು ಅಥವಾ ಸ್ಯಾನಿಟೈಸರ್ ಕಡ್ಡಾಯವಾಗಿ ಇಡಬೇಕು. ಪಡಿತರ ಚೀಟಿದಾರರು ಬೆರಳಚ್ಚು ನೀಡುವ ಮುನ್ನ ಕೈಯನ್ನು ಶುದ್ಧವಾಗಿ ತೊಳೆದುಕೊಳ್ಳಲು ಮತ್ತು ಬಯೊಮೆಟ್ರಿಕ್ ಯಂತ್ರದ ಸುತ್ತಮುತ್ತ ಶುಚಿತ್ವ ಕಾಪಾಡಬೇಕು ಎಂದು ಪಡಿತರ ಅಂಗಡಿದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Advertisement