ಮೈಸೂರು: ನಗರದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆ ಪ್ರಕರಣವನ್ನು ಭೇದಿಸಿರುವ ಸರಸ್ವತಿಪುರಂ ಪೊಲೀಸರು ಮೂವರು ಶಿಕ್ಷಕರು ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.
ಸಂಸ್ಕೃತ ಪಾಠ ಶಾಲೆಯ ನಿವೃತ್ತ ಪ್ರಾಂಶುಪಾಲರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ ಭಟ್ ಅವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಗಾಯಕಿ ಅನನ್ಯ ಭಟ್ ಅವರ ತಂದೆ ಸೇರಿ ಮಧ್ಯಸ್ಥಿಕೆದಾರ ಮಡಿವಾಳಸ್ವಾಮಿ, ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕ ಸಿದ್ದರಾಜು, ಸಹ ಶಿಕ್ಷಕ ಪರಶಿವ, ಗಾರೆ ಮೇಸ್ತ್ರಿ ನಿರಂಜನ್, ಐಡಿಎಫ್ ಸಿ ಬ್ಯಾಂಕ್ ಸಾಲ ವಸೂಲಾತಿ ಅಧಿಕಾರಿ ನಾಗೇಶ್ ಅವರನ್ನು ಬಂದಿಸಲಾಗಿದೆ.
ಬಂಧಿತರಿಂದ 55 ಸಾವಿರ ನಗದು, ನಾಲ್ಕು ದ್ವಿಚಕ್ರ ವಾಹನ, ಟಾಟಾ ಏಸ್ ಗೂಡ್ಸ್ ವಾಹನ, 8 ಮೊಬೈಲ್ ಫೋನ್ ಮತ್ತು 2 ಚಾಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಸುಪಾರಿ ಕೊಟ್ಟು ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ನಗರದ ಶಾರದಾದೇವಿ ನಗರದ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆಯಾಗಿದ್ದರು.
ಸಂಬಳದಲ್ಲಿ ಹಣ ನೀಡುವಂತೆ ಪರಶಿವಮೂರ್ತಿ ನೀಡುತ್ತಿದ್ದ ಕಿರುಕುಳದಿಂದಾಗಿ ಬೇಸತ್ತು ಆರೋಪಿ ಶಿಕ್ಷಕರು ಈ ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
Advertisement