ಬಳ್ಲಾರಿ: ಮಾಜಿ ಸಚಿವ, ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರಿವ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಜನಾರ್ಧನ ರೆಡ್ಡಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
"ಇಂದು ಸಂಜೆ (ಶನಿವಾರ) ನನಗೆ ಕೊರೋನಾ ಸೊಂಕು ದೃಡಪಟ್ಟಿರುವ ಹಿನ್ನಲೆಯಲ್ಲಿ ನಾನು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವೆ. ಆ ಕಾರಣದಿಂದ ನಾನು ನಾಳೆ ಆಗಸ್ಟ್ ೩೦ ರಂದು ಬಳ್ಳಾರಿಗೆ ಭೇಟಿ ನೀಡಿ ನನ್ನ ಪ್ರಾಣ ಸ್ನೇಹಿತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡ ನನಗೆ ಚಿಕಿತ್ಸೆ ನೀಡುತ್ತಿದೆ. ನನಗೆ ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊರೋನಾ ಪಾಸಿಟಿವ್ ಬಂದಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ ಮನೆಗೆ ಮರಳಲಿದ್ದೇನೆ " ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಸಚಿವ ಶ್ರೀರಾಮುಲು ಅವರ ತಾಯಿಯ ಅಂತಿಮ ವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್ ಜನಾರ್ಧನ ರೆಡ್ಡಿಯವರಿಗೆ ಎರಡು ದಿನಗಳ ಮಟ್ಟಿಗೆ ಬಳ್ಳಾರಿಗೆ ಆಗಮಿಸಲು ಅನುಮತಿ ನೀಡಿತ್ತು. ಆದರೆ ಕೊರೋನಾ ಕಾರಣದಿಂದ ರೆಡ್ಡಿ ಬಳ್ಳಾರಿ ಭೇಟಿ ರದ್ದಾಗಿದೆ.
Advertisement