ವಿಶ್ವವಿದ್ಯಾಲಯ ಪವಿತ್ರ ಸ್ಥಳ; ಅಲ್ಲಿ ರಾಜಕೀಯ ಸರಿಯಲ್ಲ: ಎಂ.ವೆಂಕಯ್ಯನಾಯ್ಡು

ವಿಶ್ವವಿದ್ಯಾಲಯಗಳು ದೇಗುಲದಂತೆ ಪವಿತ್ರ ಸ್ಥಾನಗಳು. ಪಾದರಕ್ಷೆಗಳನ್ನು ಹೊರಗೆ ಕಳಚಿಟ್ಟು ನಾವು ದೇವಸ್ಥಾನಕ್ಕೆ ಹೋಗುವ ರೀತಿಯಲ್ಲೇ ರಾಜಕೀಯವನ್ನು ವಿಶ್ವವಿದ್ಯಾಲಯಗಳಿಂದ ಹೊರಗಿಡಬೇಕಾದುದು ಅತ್ಯಗತ್ಯ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು
ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು

ಬೆಂಗಳೂರು: ವಿಶ್ವವಿದ್ಯಾಲಯಗಳು ದೇಗುಲದಂತೆ ಪವಿತ್ರ ಸ್ಥಾನಗಳು. ಪಾದರಕ್ಷೆಗಳನ್ನು ಹೊರಗೆ ಕಳಚಿಟ್ಟು ನಾವು ದೇವಸ್ಥಾನಕ್ಕೆ ಹೋಗುವ ರೀತಿಯಲ್ಲೇ ರಾಜಕೀಯವನ್ನು ವಿಶ್ವವಿದ್ಯಾಲಯಗಳಿಂದ ಹೊರಗಿಡಬೇಕಾದುದು ಅತ್ಯಗತ್ಯ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ರಾಜ್ಯಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌)ನ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ದೇಶಭಕ್ತಿ ತುಂಬ ಬೇಕು. ಭಾರತ್ ಮಾತಾ ಕಿ ಜೈ ಎಂದು ಕೂಗುವುದಷ್ಟೆ ದೇಶಭಕ್ತಿಯಲ್ಲ. ರಾಷ್ಟ್ರದ ಪ್ರತಿಯೊಂದು ರಾಜ್ಯದ ಜನರೂ ಒಬ್ಬರನ್ನೊಬ್ಬರು ಗೌರವಿಸಬೇಕು. ಜಾತಿ ಮತ ಧರ್ಮ, ಭಾಷೆ ಪ್ರಾಂತ್ಯಬೇಧವಿಲ್ಲದೆ ಸಕಲ ಭಾರತೀಯರು ಒಂದೇ ಎಂದು ಪರಿಗಣಿಸುವುದೇ ನಿಜವಾದ ದೇಶಭಕ್ತಿ ಎಂದು ಹೇಳಿದರು.

 ವಿಶ್ವದ ಬುದ್ದಿವಂತರು, ಉದ್ಯಮಗಳಲ್ಲಿ ಅತಿ ಎತ್ತರಕೇರಿದವರಲ್ಲಿ ದಕ್ಷಿಣ ಭಾರತೀಯರ ಸಂಖ್ಯೆ ಹೆಚ್ಚು. ದಕ್ಷಿಣ ಭಾರತದ ಮಣ್ಣಿನಲ್ಲಿ ವಿಶೇಷತೆ ಇದೆ. ಆದರೂ ಶಿಕ್ಷಣದ ಗುಣಮಟ್ಟ ಮಾತ್ರ ಹೆಚ್ವಳವಾಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಅಂದರೆ ಕೇವಲ ಉದ್ಯೋಗಕ್ಕಾಗಿ ಮಾತ್ರ ಸೀಮಿತವಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಕಮೀಷನ್ -ವೊಮಿಷನ್ ಇರಬಾರದು. ಬದಲಿಗೆ ಹವ್ಯಾಸದಿಂದ ಕರ್ತವ್ಯ ನಿರ್ವಹಿಸಬೇಕು. ಶಿಕ್ಷಣ ಪಡೆಯುವುದೆಂದರೆ ಜ್ಞಾನದ ಪರಿಧಿ ವಿಸ್ತಾರ ಎಂದರ್ಥ ಎಂದರು.

ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವುದು ಅಗತ್ಯ. ಕ್ರಮೇಣ ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲಿ ಕೊಡುವಂತಾಗಬೇಕು.ಇಂಗ್ಲಿಷ್, ಪರ್ಷಿಯನ್ ಸೇರಿದಂತೆ ಎಲ್ಲ ಭಾಷೆಯನ್ನೂ ಕಲಿಯಿರಿ ಆದರೆ ಕನ್ನಡವನ್ನು ಮರೆಯಬೇಡಿ. ಮಾತೃಭಾಷೆ ನಮ್ಮ ಕಣ್ಣುಗಳು. ಅನ್ಯಭಾಷೆಗಳು ಅದರ ಮೇಲೆ ಹಾಕಿಕೊಳ್ಳುವ ಕನ್ನಡಕದಂತೆ‌. ಬ್ರಿಟೀಷರು ಭಾರತಕ್ಕೆ ಇಂಗ್ಲೀಷ್ ತಂದರು. ಇಂಗ್ಲೀಷ್ ವಸಹಾತುಕರಣದ ಸಂಕೇತ. ಹಾಗಾಗಿ ಒಂದು ಭಾಷೆಯಾಗಿ ಇಂಗ್ಲೀಷನ್ನೂ ಕಲಿಯಿರಿ. ಆದರೆ ಶಿಕ್ಷಣ ಮಾತ್ರ ಮಾತೃಭಾಷೆಯಲ್ಲೇ ಪಡೆಯುವುದು ಸೂಕ್ತ ಎಂದು ಹೇಳಿದರು.
 
ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ನ್ಯಾಕ್ ನ ಮೌಲ್ಯಾಂಕನ ಪದ್ದತಿಯ ಕೊಡುಗೆ ಪ್ರಮುಖ ಕಾರಣ. ಈಗಲೂ ನಮ್ಮ ರಾಷ್ಡ್ರದಲ್ಲಿ ಶೇಕಡಾ 20ರಷ್ಡು ಜನರು ಅವಿದ್ಯಾವಂತರಾಗಿದ್ದಾರೆ‌. ಭಾರತ ಅಭಿವೃದ್ಧಿ ಹೊಂದುತ್ತಿದೆ. ಆದರೂ ಕೊರತೆಗಳೂ ಸಾಕಷ್ಟಿವೆ. ನಮ್ಮಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಯೇನೋ ಹೆಚ್ಚುತ್ತಿದೆ. ಆದರೆ ಶಿಕ್ಷಣದ ಗುಣಮಟ್ಟದ ಕಥೆ ಏನು ? ಎಂದು ಪ್ರಶ್ನಿಸಿದ ಅವರು, ಒಂದು ಕಾಲದಲ್ಲಿ ಶಿಕ್ಷಣದ ವಿಷಯದಲ್ಲಿ ಭಾರತವನ್ನು ವಿಶ್ವಗುರು ಎಂದು ಗುರುತಿಸಲಾಗುತ್ತಿತ್ತು. ಆದರೆ ಇಂದು ಶಿಕ್ಷಣದ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ  200 ಮೊದಲ 100 ರಾಷ್ಡ್ರಗಳ ಪಟ್ಟಿಯಲ್ಲೂ ಭಾರತಕ್ಕೆ ಸ್ಥಾನ ಸಿಕ್ಕಿಲ್ಲ.  ಇದಕ್ಕೆ ಕಾರಣ ಏನು ಎಂಬುದನ್ನು ಕಂಡುಹಿಡಿಯಬೇಕು. ಖಾಸಗಿ ವಿವಿ ಗಳಿಗೆ ಅವಕಾಶಕೊಟ್ಟಿದ್ದು ತಪ್ಪಿಲ್ಲ. ಡೀಮ್ಡ್ ವಿವಿ ಗಳಲ್ಲಿ ಗುಣಮಟ್ಟ ಪರವಾಗಿಲ್ಲ. ಆದರೆ ಸರ್ಕಾರಿ ಸ್ವಾಮ್ಯದ ವಿವಿಗಳಲ್ಲಿ ಗುಣಮಟ್ಟ ಏಕೆ ಆಗುತ್ತಿಲ್ಲ. ನಮ್ಮ ವಿವಿಗಳಿಗೆ ಕೊಡುತ್ತಿರುವ ಸೌಲಭ್ಯದಲ್ಲಿ ಯಾವುದೇ ಕೊರತೆ ಇಲ್ಲ. ಆದರೂ ಗುಣಮಟ್ಟ ಹೆಚ್ಚಳ ಏಕಾಗುತ್ತಿಲ್ಲ ಎಂದು ಉಪ ರಾಷ್ಟ್ರಪತಿ ಪ್ರಶ್ನಿಸಿದರು.

ರಾಜ್ಯಪಾಲ ವಜುಬಾಯಿ ವಾಲಾ ಮಾತನಾಡಿ, ನ್ಯಾಕ್ ಇಂದು 25 ವರ್ಷಗಳನ್ನು ಪೂರೈಸಿದೆ. ಹಲವಾರು ಸಂಸ್ಥೆಗಳು 25  ವರ್ಷ, 50 ವರ್ಷ 75 ವರ್ಷ ಪೂರೈಸುತ್ತವೆ. ಆದರೆ ಆ ಎಲ್ಲ ಸಂಸ್ಥೆಗಳು ದೇಶಕ್ಕೆ ಏನು  ಕೊಡುಗೆ ಕೊಟ್ಟಿವೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಂದು ಸಂಸ್ಥೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ನ್ಯಾಕ್ ಸಂಸ್ಥೆಯು ಶಿಕ್ಷಣ ಸಂಸ್ಥೆಗಳ ಮೌಲ್ಯಾಂಕನ  ಮಾಡುತ್ತದೆ. ಎ, ಬಿ ಮತ್ತು ಸಿ ಗ್ರೇಡ್ ನೀಡುತ್ತದೆ. ನನ್ನ ಪ್ರಕಾರ ಪ್ರತಿಯೊಂದು ಶಿಕ್ಷಣ  ಸಂಸ್ಥೆಗೂ ಎ ಗ್ರೇಡ್ ಬರಬೇಕು. ಇಲ್ಲವಾದರೆ ಆ ಸಂಸ್ಥೆಗಳನ್ನು ಮುಚ್ಚಿಬಿಡುವುದು  ಸೂಕ್ತ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈಗಲೂ ಬಿ ಮತ್ತು ಸಿ ಗ್ರೇಡ್ ಪಡೆಯುವ  ವಿದ್ಯಾರ್ಥಿಗಳನ್ನು ಹಿಂದುಳಿದವರು ಎಂದು ಗುರುತಿಸುತ್ತಾರೆ. ಶಿಕ್ಷಣ ಸಂಸ್ಥೆಗಳಿಗೂ ಇದೇ  ಮಾನದಂಡ ಅನ್ವಯವಾಗಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು  ಬದಲಾವಣೆಯಾಗಬೇಕು‌ ಎಂದು ರಾಜ್ಯಪಾಲರು ಹೇಳಿದರು.

ಕಾಲೇಜು  ಉಪನ್ಯಾಸಕರಿಗೆ ತಿಂಗಳ ಒಂದನೇ ತಾರೀಖು ವೇತನ ಪಡೆಯುವುದಷ್ಟೇ ಸಾಧನೆಯಾಗಬಾರದು. ತಮ್ಮ  ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎಷ್ಟು ಕಲಿಯುತ್ತಿದ್ದಾನೆ ? ಯಾವ  ಸಂಶೋಧನೆ ಮಾಡುತ್ತಿದ್ದಾನೆ ? ಎಂಬುದನ್ನು ಗಮನಿಸಬೇಕು. ಯಾವ ಶಾಲಾ ಕಾಲೇಜುಗಳಲ್ಲಿ  ವಿದ್ಯಾರ್ಥಿಗಳ ವಿಕಸನಕ್ಕೆ ಸೂಕ್ತವಾದ ರೀತಿಯಲ್ಲಿ ಶಿಕ್ಷಣ ನೀಡುವುದಿಲ್ಲವೋ ಅಂತಹ  ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಬಿಡಲು ನ್ಯಾಕ್ ಶಿಫಾರಸ್ಸು ಮಾಡುವುದು ಸೂಕ್ತ ಎಂದು ವಾಲಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com