ಬೆಂಗಳೂರು: ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕೆ ಸುಧಾಕರ್ ಅವರು, ಸಾಮಾನ್ಯ ಕೆಮ್ಮು, ನೆಗಡಿ, ಮೈ-ಕೈ ನೋವಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಣೆ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಅವ್ಯವಸ್ಥೆಗಳಿಗೆ ಕಡಿವಾಣ ಹಾಕಲು ಸರ್ಕಾರ ಬದ್ಧವಿದೆ ಎಂದಿದ್ದಾರೆ.
'ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಂಗಳೂರಿನ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಕೆಮ್ಮು, ನೆಗಡಿ, ಮೈ-ಕೈ ನೋವಿಗೂ ಚಿಕಿತ್ಸೆ ನೀಡುತ್ತಿಲ್ಲ. ರೋಗಿ ಬಳಿ ಹಣ ಪೀಕುತ್ತಿವೆ. ಬಿಬಿಎಂಪಿಯಿಂದ ಲೆಟರ್ ತೆಗೆದುಕೊಂಡು ಬನ್ನಿ ಎಂದು ಉಡಾಫೆ ಉತ್ತರ ನೀಡುತ್ತಿರುವ ಸಿಬ್ಬಂದಿ ಮಾತನಾಡಿರುವುದನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಮಾನವೀಯತೆ ಮರೆತು ಚಿಕಿತ್ಸೆ ಕೊಡದೇ ರೋಗಿಗಳನ್ನು ಪರದಾಡಿಸುವ ದೃಶ್ಯಗಳು ಪ್ರಸಾರವಾಗಿವೆ. ಸಚಿವನಾದ ನನ್ನ ಗಮನಕ್ಕೂ ಬಂದಿದೆ. ನಮ್ಮ ಸರ್ಕಾರ ಇಂತಹ ಅವ್ಯವಸ್ಥೆಗೆ ಕಡಿವಾಣ ಹಾಕಲು ಬದ್ಧವಿದೆ. ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
Advertisement