ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗಿದ್ದು, ಪ್ರಮುಖವಾಗಿ ಬೆಂಗಳೂರಿನಲ್ಲಿನ ಪರಿಸ್ಥಿತಿ ಸರ್ಕಾರದ ನಿದ್ರೆಗೆಡುವಂತೆ ಮಾಡಿದೆ. ಹೀಗಾಗಿ ಕೊರೋನಾ ಮಟ್ಟಹಾಕಲು ಸರ್ಕಾರ ಮಂಗಳವಾರ ರಾತ್ರಿಯಿಂದ ಮುಂದಿನ 1 ವಾರಗಳ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸುತ್ತಿದೆ.
ಈ ಬಾರಿಯ ಲಾಕ್ಡೌನ್ ನಿಯಮಗಳು ಅತ್ಯಂತ ಕಠಿಣವಾಗಿರಲಿದೆ ಎಂದು ಹೇಳಲಾಗುತ್ತಿದ್ದು, ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಅಧಿಕಾರಿಗಳು ಸಂಪೂರ್ಣ ಕಡಿವಾಣ ಹಾಕಲಿದ್ದಾರೆ. ಅನಗತ್ಯವಾಗಿ ಸಂಚರಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಖ್ಯ ಕಾರ್ಯದರ್ಶಿಗಳು ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಜು.14ರಂದು ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ.22ರಂದು ಬೆಳಿಗ್ಗೆ 5 ಗಂಟೆಯವರೆಗೆ ಒಟ್ಟು 7 ದಿನಗಳ ಕಾಲದವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ.
ಈ ಬಾರಿ ಲಾಕ್'ಡೌನ್ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಸೀಮಿತವಾಗಲು ಈ ಎರಡು ಜಿಲ್ಲೆ ವಿಪರೀತ ಸೋಂಕು ಇರುವುದು ಕಾರಣವಾಗಿದೆ. ಸೋಂಕು ವ್ಯಾಪಕವಾಗುವ ಮೊದಲು ರಾಜ್ಯ ಸರ್ಕಾರವು ಮಾ.23ರಂದು ಒಂದು ವಾರದ ಮಟ್ಟಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ, ಕಲಬುರಗಿ ಸೇರಿ 9 ಜಿಲ್ಲೆಗಳಲ್ಲಿ ಲಾಕ್'ಡೌನ್ ಜಾರಿಗೊಳಿಸಿತ್ತು.
ಈ ವೇಳೆ ಕಠಿಣ ನಿಯಮಗಳನ್ನು ಜಾರಿಗೊಳಿಸದ ಇದ್ದುದರಿಂದ ಯುಗಾದಿ ಹಿನ್ನೆಲೆಯಲ್ಲಿ ಎಲ್ಲಾ ಮಾರುಕಟ್ಟೆಗಳಲ್ಲೂ ಜನಜಾತ್ರೆಯಾಗಿತ್ತು. ಈ ಬಾರಿ ಹಾಗಾಗದಂತೆ ದಿನನಿತ್ಯದ ವಸ್ತುಗಳ ಖರೀದಿಗೂ ಸಮಯ ನಿಗದಿ ಮಾಡಿದ್ದು, ದಿನಪೂರ್ತಿ ತರಕಾರಿ, ದಿನಸಿ ಹೆಸರಿನಲ್ಲಿ ಹೊರಗೆ ಬರುವವರನ್ನು ನಿಯಂತ್ರಿಸಲು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
Advertisement